ಕವಿತಾಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ವಿವಿಧೆಡೆ ರಸ್ತೆ ಮೇಲೆ ನೀರು ನುಗ್ಗಿದ ಪರಿಣಾಮ ಸಂಚಾರ ಸ್ಥಗಿತವಾಗಿದೆ. ಹಳ್ಳಗಳು ತುಂಬಿ ಹರಿಯುತ್ತಿವೆ.
ಸಮೀಪದ ಯಕ್ಲಾಸ್ಪುರ ಗ್ರಾಮದ ಕೆರೆ ಸಂಪೂರ್ಣ ತುಂಬಿದ್ದು ಕೆರೆಯ ಕೋಡಿ ಮೂಲಕ ನೀರು ಹೆದ್ದಾರಿಯಲ್ಲಿ ಹರಿದಿದ್ದರಿಂದ ಕೆಲಸಮಯ ಸಂಚಾರ ಸ್ಥಗಿತವಾಗಿತ್ತು. ಅಕ್ಕಪಕ್ಕದ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದು ಬೆಳೆಹಾನಿ ಉಂಟಾಗಿದೆ.
ತೊಪ್ಪಲದೊಡ್ಡಿ ಹಳ್ಳದ ನೀರು ನುಗ್ಗಿ ಹುಸೇನ್ಪುರ, ಸೈದಾಪುರ, ಕಡ್ಡೋಣಿ ತಿಮ್ಮಾಪುರ ಮತ್ತು ತೊಪ್ಪಲದೊಡ್ಡಿ ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಯಿತು. ಗೂಗೆಬಾಳ, ಹಿರೇದಿನ್ನಿ, ಬಾಗಲವಾಡ ಗ್ರಾಮಗಳ ಹಳ್ಳಗಳಲ್ಲಿ ಅಧಿಕ ಪ್ರಮಾಣ ನೀರು ಹರಿಯುತ್ತಿದೆ.
ಕವಿತಾಳ ಕೆರೆಗೆ ನೀರಿನ ಒಳ ಹರಿವು ಹೆಚ್ಚಿದ್ದು, ಪಕ್ಕದ ಜೀಮಿನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ವಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 600 ಮನೆಗಳ ಗೋಡೆ ಕುಸಿದಿವೆ. ಈರುಳ್ಳಿ, ಸಜ್ಜೆ. ಹತ್ತಿ, ತೊಗರಿ ಬೆಳೆ ನಾಶವಾಗಿದೆ.