ಬೆಂಗಳೂರು: ಟ್ರೀನಿಟಿ ಚರ್ಚ್ ಬಳಿಯ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿ ಸೋಮವಾರ ಅಪಘಾತಗೊಂಡು ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ರೇಬೆಕ್ ದೇವಾಸ್ (53) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಹಲಸೂರು ಬಳಿಯ ಜೋಗುಪಾಳ್ಯದ ನಿವಾಸಿಯಾಗಿದ್ದ ರೇಬೆಕ್ ಅವರು ಟ್ರೀನಿಟಿ ಚರ್ಚ್ನಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದರು.
ಕೆಲಸ ಮುಗಿಸಿ ರಾತ್ರಿ 9.30ರ ಸುಮಾರಿಗೆ ರಸ್ತೆಯ ಮೂಲಕ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಆಗ ಹಿಂದೆಯಿಂದ ವೇಗವಾಗಿ ಬಂದ ಆಟೊ ಅವರಿಗೆ ಗುದ್ದಿದೆ. ಕೆಳಗೆ ಬಿದ್ದಿದ್ದರಿಂದ ಅವರ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿತ್ತು. ಸ್ಥಳದಲ್ಲಿದ್ದವರು ಗಾಯಾಳುವನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು.
ಆಟೊ ಜಪ್ತಿ ಮಾಡಿದ್ದು, ಚಾಲಕ ಆಲ್ತಾಫ್ (24) ಅವರನ್ನು ಬಂಧಿಸಿದ್ದೇವೆ. ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದ ಆರೋಪದಡಿ ಪ್ರಕರಣ ದಾಖಲಿದ್ದೇವೆ ಎಂದು ಹಲಸೂರು ಸಂಚಾರ ಪೊಲೀಸರು ತಿಳಿಸಿದರು.