ಚಿಂಚೋಳಿ: ಬಟ್ಟೆ ತೊಳೆಯಲು ನೀರು ತರಲೆಂದು ತೆರಳಿದ್ದ 11ವರ್ಷದ ಬಾಲಕಿ ಸೀಮಾ ಗೇಮು ಚವ್ಹಾಣ (11) ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಸೇರಿಬಡಾ ತಾಂಡಾದಲ್ಲಿ ಬುಧವಾರ ನಡೆದಿದೆ.
ಬೆಳಿಗ್ಗೆ 10ಗಂಟೆ ಸುಮಾರಿಗೆ ಬಟ್ಟೆ ತೊಳೆಯಲು ದಂಡೆಯ ಮೇಲೆ ಬಟ್ಟೆಯ ಬುಟ್ಟಿ ಇಟ್ಟು ನೀರು ತೆಗೆದುಕೊಳ್ಳಲು ಬಾಲಕಿ ಬಾವಿಗೆ ಇಳಿದಿದ್ದಾಳೆ. ಕಲ್ಲಿನ ಮೇಲೆ ನಿಂತು ನೀರು ತುಂಬಿಕೊಳ್ಳುವಾಗ ಕಲ್ಲು ಜಾರಿ ಬಾವಿಗೆ ಬಿದ್ದಿದೆ. ಅಗ ಬಾಲಕಿ ನೀರು ಪಾಲಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಂದೆ ಗೇಮು ಚವ್ಹಾಣ ನೀಡಿದ ದೂರಿನ ಮೇರೆಗೆ ರಟಕಲ್ ಠಾಣೆಯ ಸಹಾಯಕ ಸಬ್ ಇನಸ್ಪೆಕ್ಟರ್ ರಾಮಲಿಂಗ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ್ ಭೇಟಿ ನೀಡಿ ಸಾಂತ್ವನ ಹೇಳಿದರು.