ಬೆಂಗಳೂರು: ಮಹದೇವಪುರ ಕ್ಷೇತ್ರದ ಕಾಡುಗೋಡಿ ವಾರ್ಡ್ ವ್ಯಾಪ್ತಿಯಲ್ಲಿನ ಚನ್ನಸಂದ್ರದಿಂದ ತಿರುಮಲಶೆಟ್ಟಿಹಳ್ಳಿಗೆ ಸಂಪರ್ಕಿಸುವ ಮುಖ್ಯರಸ್ತೆ ಗುಂಡಿಗಳಿಂದ ಕೂಡಿದ್ದು, ಕೆಸರು ಗದ್ದೆಯಂತಾಗಿದೆ.
ಈ ರಸ್ತೆಯ ಪಕ್ಕದಲ್ಲಿಯೇ ರಾಜಕಾಲುವೆ ಇದ್ದು, ಗುಂಡಿಗಳನ್ನು ತಪ್ಪಿಸಲು ಹೋಗಿ ಕಾಲುವೆಗೆ ಬೀಳುವ ಅಪಾಯಗಳು ಹೆಚ್ಚಿವೆ. ಓಫಾರಂ ಹಾಗೂ ಚಿಕ್ಕತಿರುಪತಿ ಕಡೆಗೆ ಸಂಚರಿಸುವವರು ಗುಂಡಿಗಳಿವೆಯೆಂದು ಈ ನೇರ ಮಾರ್ಗವನ್ನು ಬಿಟ್ಟು, ಹೊಸಕೋಟೆ ಮಾರ್ಗವಾಗಿ ಸುತ್ತುಹಾಕಿಕೊಂಡು ಹೋಗುತ್ತಿದ್ದಾರೆ.
‘ಕಾಡುಗೋಡಿ ವಾರ್ಡ್ನಲ್ಲಿ ವಸತಿ ಸಮುಚ್ಚಯಗಳಿರುವ ರಸ್ತೆಗಳಿಗೆ ಮಾತ್ರ ಡಾಂಬರೀಕರಣ ಮಾಡಲಾಗಿದೆ. ಆದರೆ, ಸಾಕಷ್ಟು ಜನರು ಸಂಚರಿಸುವ ರಸ್ತೆಯನ್ನು ಕಡೆಗಣಿಸಿದ್ದಾರೆ’ ಎಂದು ಸ್ಥಳೀಯರಾದ ವಿನೋದ್ ಕುಮಾರ್ ದೂರಿದರು.
‘ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿ ಸದಸ್ಯ ಎಸ್. ಮುನಿಸ್ವಾಮಿ ಹಾಗೂ ಇತರೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಗುಂಡಿಗಳಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಈ ರಸ್ತೆಯನ್ನು ಡಾಂಬರೀಕರಣಗೊಳಿಸಿ ಒಂದು ವರ್ಷವೂ ಕಳೆದಿಲ್ಲ. ರಸ್ತೆಯ ಟಾರ್ ಕಿತ್ತುಹೋಗಿದೆ. ಕಾಮಗಾರಿ ಕಳಪೆಯಾಗಿದೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.