ಶ್ರೀನಿವಾಸಪುರ: 'ಜನ ಬೆಂಬಲ ಇರುವ ವ್ಯಕ್ತಿಗಳು ಪಕ್ಷಕ್ಕೆ ಬರುವುದರಿಂದ ಪಕ್ಷದ ಬಲ ಹೆಚ್ಚುತ್ತದೆ. ಕೋಲಾರದ ಶಾಸಕ ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರುವುದಾದರೆ ಪಕ್ಷ ಸ್ವಾಗತಿಸುತ್ತದೆ' ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಕನಕ ಭವನ ಕಟ್ಟಡವನ್ನು ಮಂಗಳವಾರ ರಾತ್ರಿ ವೀಕ್ಷಿಸಿದ ಬಳಿಕ, ವರ್ತೂರು ಪ್ರಕಾಶ್ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವರ್ತೂರು ಪ್ರಕಾಶ್ ಅವರಿಗೆ ರಾಜ್ಯದಾದ್ಯಂತ ಬೆಂಬಲಿಗರಿದ್ದಾರೆ. ಅವರು ಪಕ್ಷಕ್ಕೆ ಬರುವುದರಿಂದ ಒಳ್ಳೆಯದೇ ಆಗುತ್ತದೆ ಎಂದು ಹೇಳಿದರು.
ಶ್ರೀನಿವಾಸಪುರದಲ್ಲಿ ಕನಕ ಭವನ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ₹ 50 ಲಕ್ಷ ನೀಡಿದೆ. ಭವನದ ನಿರ್ಮಾಣ ಕಾರ್ಯ ಮಾದರಿಯಾಗಿ ನಡೆಯುತ್ತಿದೆ. ಹಣವನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ₹ 40 ಲಕ್ಷ ನೆರವು ನೀಡುವಂತೆ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ವೇಮಣ್ಣ ಮನವಿ ಮಾಡಿದ್ದಾರೆ. ಇದಕ್ಕಾಗಿ ಶಾಸಕರ ನಿಧಿಯಿಂದ ₹ 5 ಲಕ್ಷ ನೀಡುತ್ತೆನೆ. ಜತೆಗೆ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ 101 ಸಮುದಾಯ ಭವನಗಳ ನಿರ್ಮಾಣಕ್ಕೆ ಸರ್ಕಾರ ₹ 175 ಕೋಟಿ ಬಿಡುಗಡೆ ಮಾಡಿದೆ. ಇನ್ನೂ ₹ 100 ಕೋಟಿ ಬೇಡಿಕೆ ಇದೆ. ಸರ್ಕಾರ ತನ್ನ ಮಿತಿಯಲ್ಲಿ ರೈತರ ಸಾಲ ಮನ್ನಾ ಮಾಡಿದೆ. ಅನ್ನಭಾಗ್ಯ ಮತ್ತಿತರ ಜನಪರ ಯೋಜನೆ ಜಾರಿಗೆ ತಂದಿದೆ. ಇದರಿಂದ ಸಮಾಜದಲ್ಲಿನ ಬಡವರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ವೇಮಣ್ಣ, ಕಾರ್ಯದರ್ಶಿ ಮಂಜುನಾಥ್, ರೋಣೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ್, ಪುರಸಭೆ ಮುಖ್ಯ ಅಧಿಕಾರಿ ವಿ.ಸತ್ಯನಾರಾಯಣ, ಮುಖಂಡರಾದ ಕೆ.ಕೆ.ಮಂಜು, ಯಮನೂರು ನಾಗರಾಜ್, ಇಪ್ತಿಕಾರ್ ಅಹ್ಮದ್ ಇದ್ದರು.