ಕೊಪ್ಪಳ: ಬಿತ್ತನೆ ಮಾಡಿದ 20ರಿಂದ 30 ದಿನದ ನಂತರ ಕುಡಿ ಚಿವುಟುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ ಹೇಳಿದರು.
ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದಲ್ಲಿ ಈಚೆಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆದ ‘ಲಾಭದಾಯಕ ಕಡಲೆ ಬೇಸಾಯದ ತರಬೇತಿ ಕಾರ್ಯಕ್ರಮ’ದಲ್ಲಿ ಮಾತನಾಡಿದರು.
‘ಬಿತ್ತುವ ಪೂರ್ವದಲ್ಲಿ ಕಡಲೆ ಬೀಜಕ್ಕೆ ಬೀಜೋಪಚಾರ ಮಾಡಬೇಕು. 25 ಕೆ.ಜಿ ಬೀಜಕ್ಕೆ 500 ಗ್ರಾಂ ರೈಜೋಬಿಯಂ, 500 ಗ್ರಾಂ ರಂಜಕ ಕರಗಿಸುವ ಅಣುಜೀವಿಯ ಗೊಬ್ಬರ (ಪಿ.ಎಸ್.ಬಿ) ಹಾಗೂ 100 ರಿಂದ 200 ಗ್ರಾಂ ಟ್ರೈಕೋಡರ್ಮಾ ಈ ಮೂರನ್ನು ಪ್ರತಿ ಬೀಜಕ್ಕೆ ತಗುಲುವಂತೆ ಮಿಶ್ರಣ ಮಾಡಬೇಕು.
ಬೀಜೋಪಚಾರವಾದ ನಂತರ 6 ಗಂಟೆ ಗಾಳಿಗೆ ಬಿಟ್ಟು ನಂತರ ಬಿತ್ತಲು ಉಪಯೋಗಿಸಬೇಕು. ಈ ಬೀಜೋಪಚಾರ ಮಾಡುವುದರಿಂದ ಸಿಡಿರೋಗ, ಎಲೆ ಮುಟುರು ರೋಗ, ಗೊಡ್ಡುರೋಗಗಳನ್ನು ತಡೆಗಟ್ಟಬಹುದು’ ಎಂದರು