ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌: ಕಾವೇರಿ ರಥೋತ್ಸವ, ತೆಪ್ಪೋತ್ಸವ

Last Updated 20 ಅಕ್ಟೋಬರ್ 2017, 8:52 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ದೀಪಾವಳಿ ಅಂಗವಾಗಿ ತಾಲ್ಲೂಕಿನ ಕೆ.ಆರ್‌.ಎಸ್‌.ನಲ್ಲಿ ಬುಧವಾರ ಕಾವೇರಿ ಮಾತೆಯ ರಥೋತ್ಸವ ಹಾಗೂ ತೆಪ್ಪೋತ್ಸವ ಸಡಗರದಿಂದ ನಡೆಯಿತು.
ಜಲಾಶಯದ ಮಧ್ಯ ಭಾಗದಲ್ಲಿರುವ ಕಾವೇರಿ ಮಾತೆ ಪ್ರತಿಮೆಗೆ ಅಗ್ರ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ 12.20ಕ್ಕೆ ರಥೋತ್ಸವ ಆರಂಭವಾಯಿತು.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜೇಗೌಡ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀರಂಗಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಶರ್ಮಾ, ಅರ್ಚಕ ಪ್ರಸನ್ನ ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಿದರು. ಸರ್ವಾಲಂಕೃತ ರಥವನ್ನು ಭಕ್ತರು ಉತ್ಸಾಹದಿಂದ ಎಳೆದರು.

ರಥವನ್ನು ಎಳೆಯುವಾಗ ‘ಜೈ ಜೈ ಮಾತಾ ಕಾವೇರಿ ಮಾತಾ...ಕಾವೇರಿ ಮಾತಾಕಿ ಜೈ’ ಇತರ ಘೋಷಣೆಗಳು ಮೊಳಗಿದವು. ಭಕ್ತರು ರಥಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದಕ್ಕೂ ಮುನ್ನ ಕೆ.ಆರ್‌.ಎಸ್‌ ಗ್ರಾಮದ ಅರಳಿ ಮರ ವೃತ್ತದಿಂದ ಕಾವೇರಿ ಮಾತೆಯ ಮೂರ್ತಿಯನ್ನು ಬೃಂದಾವನದವರೆಗೆ ಮೆರವಣಿಗೆ ಮೂಲಕ ತರಲಾಯಿತು. ದಾರಿಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿದರು.

ಸಂಜೆ 6.30ಕ್ಕೆ ಬೃಂದಾವನದ ದೋಣಿ ವಿಹಾರ ಕೇಂದ್ರದಲ್ಲಿ ಕಾವೇರಿ ತೆಪ್ಪೋತ್ಸವ ನಡೆಯಿತು. ತೆಪ್ಪವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರು ಕೂಡ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜೇಗೌಡ ಮಾತನಾಡಿ, ‘ಸ್ಥಳೀಯ ಜನಪ್ರತಿನಿಧಿಗಳು, ವ್ಯಾಪಾರಿಗಳು ಹಾಗೂ ಸಂಘ, ಸಂಸ್ಥೆಗಳ ಮುಖ್ಯಸ್ಥರು ರಥೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ’ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷ ಪಿ. ರಾಜು, ಸದಸ್ಯ ವಿಜಯಕುಮಾರ್‌, ಎಇಇ ವಾಸುದೇವ್‌ ಇತರರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT