ಬೆಂಗಳೂರು: ‘ಧನದಾಹಿ ವೈದ್ಯರು ಕ್ಷೌರಿಕರು, ಜೇಬುಗಳ್ಳರಿಗಿಂತಲೂ ಕಡೆ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಅವರು ಹೇಳಿಕೆ ನೀಡುವ ಮೂಲಕ ನಮ್ಮ ಸಮಾಜದವರಿಗೆ ಅವಮಾನ ಮಾಡಿದ್ದಾರೆ. ಅವರು ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು’ ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಯು.ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.
‘ಕ್ಷೌರಿಕರಿಗೆ ಅವಹೇಳನ ಮಾಡಿಲ್ಲ ಎಂದು ಸಚಿವರು ಸ್ಪಷ್ಟನೆಯನ್ನೂ ನೀಡಿದ್ದಾರೆ. ಇದು ಹೇಗಿದೆ ಎಂದರೆ, ಚಪ್ಪಲಿಯನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಹೊಡೆದು ಆನಂತರ, ನಾನು ಹೊಡೆದೇ ಇಲ್ಲ ಎನ್ನುವಂತಿದೆ. ಕುಲಕಸುಬು ಮಾಡುವವರ ಬಗ್ಗೆ ನಿಕೃಷ್ಟವಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವಂತಹದ್ದಲ್ಲ’ ಎಂದು ಹೇಳಿದ್ದಾರೆ.
‘ಮಡಿವಂತರು ನಮ್ಮನ್ನು ಬಳಸಿಕೊಂಡು ಬಳಿಕ ತುಚ್ಛವಾಗಿ ಕಾಣುವುದು ಸಾಮಾನ್ಯವಾಗಿದೆ. ಸಚಿವರು ನಮ್ಮಂತಹವರ ಧ್ವನಿಯಾಗಿರಬೇಕು. ಆದರೆ, ಅವರು ನೀಡಿರುವ ಹೇಳಿಕೆಯಿಂದ ನಮಗೆ ಅತೀವ ನೋವು ಉಂಟು ಮಾಡಿದೆ. ಸಾರ್ವಜನಿಕ ಜೀವನದಲ್ಲಿ ನಮಗೆ ಭರಿಸಲಾರದ ಅವಮಾನ ಮಾಡಿದ್ದಾರೆ. ಅವರು ಬಹಿರಂಗ ಕ್ಷಮೆ ಕೇಳದಿದ್ದರೆ ಇದೇ 24ರಿಂದ ರಾಜ್ಯದಾದ್ಯಂತ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಕ್ಷಮೆ ಕೇಳದಿದ್ದರೆ ಕ್ಷೌರ ನಿರಾಕರಣೆ: ‘ರಮೇಶ್ ಕುಮಾರ್ ಅವರು ಕ್ಷೌರಿಕರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರಿಗೂ ಹಾಗೂ ಅವರ ಕುಟುಂಬಸ್ಥರಿಗೂ ಕ್ಷೌರ ನಿರಾಕರಣೆ ಮಾಡುತ್ತೇವೆ’ ಎಂದು ‘ಕ್ಷೌರಿಕ್ ಬ್ರಿಗೇಡ್’ನ ರಾಜ್ಯ ಘಟಕದ ಸಂಚಾಲಕ ರವಿಕಡೂರು
ಎಚ್ಚರಿಕೆ ನೀಡಿದರು.
‘ಕ್ಷೌರ ವೃತ್ತಿ ಕಳ್ಳತನವಲ್ಲ. ಅದೊಂದು ಕುಲವೃತ್ತಿ. ಕ್ಷೌರ ವೃತ್ತಿಯ ಬಗ್ಗೆ ಕನಿ ಕನಿಷ್ಠ ಅರಿವಿಲ್ಲದವರಂತೆ ಅತ್ಯಂತ ಕೀಳಾಗಿ ಸಚಿವರು ಮಾತನಾಡಿರುವುದು ಅಕ್ಷಮ್ಯ. ಸಚಿವರು ಅತ್ಯಂತ ಪ್ರಜ್ಞಾಪೂರ್ವಕವಾಗಿಯೇ ಕ್ಷೌರಿಕರನ್ನು ಜೇಬುಗಳ್ಳರೊಂದಿಗೆ ಇಟ್ಟು ತಮ್ಮ ವಾಗ್ಝರಿಯನ್ನು ಮುಂದುವರಿಸಿದ್ದಾರೆ.
ವಂಚನೆಗೆ ಅವಕಾಶವಿಲ್ಲದ ನಮ್ಮ ವೃತ್ತಿಯನ್ನು ಧನದಾಯಿ ನರರಕ್ಕಸರಿಗೆ ಹೋಲಿಸಿ ಕ್ಷೌರಿಕರಿಗಿಂತ ಕಡೆ ಎಂದು ಹೇಳಿಕೆ ನೀಡಿರುವುದು ನಮಗೆ ಘಾಸಿ ಉಂಟು ಮಾಡಿದೆ. ಕ್ಷೌರಿಕರು ಅನಗತ್ಯವಾಗಿ ಕತ್ತರಿ ಆಡಿಸಿದರೆ ರಮೇಶ್ ಕುಮಾರ್ ಅಂಥವರ ಅವಯವಗಳು ಕೂಡ ಉಳಿ
ಯುವುದಿಲ್ಲ. ಇಂತಹ ಹೇಳಿಕೆಗಳು ಜಾತಿ ಅಹಂಕಾರದಿಂದ ಬಂದವು’ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.