ಚಿತ್ರದುರ್ಗ: ಹೊಸದುರ್ಗ ತಾಲ್ಲೂಕು ಹೆಗ್ಗೆರೆ ಗ್ರಾಮದ ಕೆಂಪಮ್ಮನ ಕೆರೆಯಲ್ಲಿ ಈಜಾಡಲು ಹೋಗಿ ನಾಪತ್ತೆಯಾಗಿದ್ದ ಮೂವರು ಬಾಲಕರ ಶವಗಳನ್ನು ಶನಿವಾರ ಬೆಳಿಗ್ಗೆ ಹೊರ ತೆಗೆಯಲಾಗಿದೆ.
ಕಾಂತರಾಜ್, ಮಹಂತೇಶ್ ಮತ್ತು ಕೆಂಪರಾಜು ನೀರಿನಲ್ಲಿ ಮುಳುಗಿದ ಬಾಲಕರು. ಎಲ್ಲರೂ 14 ವರ್ಷ ವಯಸ್ಸಿನವರಾಗಿದ್ದು, ಹೆಗ್ಗೆರೆ ಗ್ರಾಮದವರು. ಲಕ್ಷ್ಮಿ ರಂಗನಾಥ ಗ್ರಾಮಾಂತರ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು.
ಶುಕ್ರವಾರ ಮಧ್ಯಾಹ್ನ ಈಜಲು ತೆರಳಿದ್ದ ಬಾಲಕರು ಕೆರೆಯಲ್ಲಿ ಮುಳುಗಿದ್ದರು. ಸಂಜೆ ಹೊತ್ತಿಗೆ ಈ ವಿಷಯ ಬೆಳಕಿಗೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಬಾಲಕರಿಗಾಗಿ ಕೆರೆಯಲ್ಲಿ ಶೋಧ ಕಾರ್ಯ ಆರಂಭಿಸದ್ದರು. ಕತ್ತಲಾವರಿಸಿದ್ದರಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು.
ಶನಿವಾರ ಮುಂಜಾನೆ ಕಾರ್ಯಾಚರಣೆ ಮುಂದುವರಿಯಿತು. 7ಗಂಟೆ ಸುಮಾರಿಗೆ ಮೂವರು ಬಾಲಕರ ಶವಗಳನ್ನು ಹೊರತೆಗೆಯಲಾಯಿತು. ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.