ಹಿರಿಯೂರು: ಹತ್ತು ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದೇವೆ. ವಿದ್ಯುತ್, ರಸ್ತೆ, ಚರಂಡಿ, ನೀರು ಯಾವ ಸೌಲಭ್ಯಗಳು ಇಲ್ಲದೇ ಬದುಕುತ್ತಿದ್ದೇವೆ ಎಂದು ತಾಲ್ಲೂಕಿನ ಮಸ್ಕಲ್ ಮಟ್ಟಿ ಗ್ರಾಮಸ್ಥರು ಅಳಲು ತೋಡಿಕೊಂಡರು.
ಬೀದಿ ದೀಪ ಕಲ್ಪಿಸಬೇಕು. ರಸ್ತೆ, ಚರಂಡಿ ಇಲ್ಲದ ಕಾರಣ ಇಡೀ ಬಡಾವಣೆ ಸಾಂಕ್ರಾಮಿಕ ರೋಗಗಳ ತಾಣವಾಗಿದೆ ಎಂದು ಗ್ರಾಮಸ್ಥರಾದ ಪಿ. ಚಿದಾನಂದ, ಓಬಳಮ್ಮ, ಪಿ. ಚಂದನ, ಶಿವಮೂತಿ, ಯಶೋದಮ್ಮ, ಕರಿಯಪ್ಪ, ಕೆಂಚರಾಯಪ್ಪ, ಪಾತಲಿಂಗಪ್ಪ, ಲಕ್ಷ್ಮಕ್ಕ, ಕೆಂಚಮ್ಮ, ಶಶಿಕಲಾ, ಸುರೇಶ್ ಬೇಸರ ವ್ಯಕ್ತಪಡಿಸಿದರು.
ಮನೆಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲವಾದರೆ ಮಹಿಳೆಯರು ಮಕ್ಕಳೊಂದಿಗೆ ಗ್ರಾಮ ಪಂಚಾಯ್ತಿ, ಬೆಸ್ಕಾಂ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.