ಕಾರವಾರ: ಬಲಿಪಾಡ್ಯಮಿ ನಿಮಿತ್ತ ಶುಕ್ರವಾರ ಗೌಳಿಗರು, ಹಾಲಕ್ಕಿಗಳು ಹಾಗೂ ರೈತರು ಶ್ರದ್ಧಾಭಕ್ತಿಯಿಂದ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.ಪೂಜೆಯ ಜೊತೆಗೆ ಗೋವುಗಳಿಗೆ ವಿಶೇಷ ಖಾದ್ಯ ಸಮರ್ಪಿಸಿ ಧನ್ಯತೆ ಮೆರೆದರು. ಹಲವೆಡೆ ಗುರುವಾರವೇ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಗೋವುಗಳನ್ನು ತೊಳೆದು ಕೋಡುಗಳಿಗೆ ಬಣ್ಣ ಬಳಿಯಲಾಗಿತ್ತು. ಹೂವು, ಕಂಕಣ, ರಿಬ್ಬನ್ ಕಟ್ಟಿ ಶೃಂಗರಿಸಲಾಗಿತ್ತು. ಜೇಡಿಮಣ್ಣಿನ ವೃತ್ತಾಕಾರದ ಹಚ್ಚೆ ಹಾಕಿ ಗೋವುಗಳ ಕೊರಳಿಗೆ ಕಂಕಣವನ್ನು ಸುತ್ತಲಾಗಿತ್ತು. ಕೆಂಪು, ಹಳದಿ ವಸ್ತ್ರದ ಕಂಕಣದಲ್ಲಿ ತೆಂಗಿನ ಕಾಯಿ, ಬೆಲ್ಲ, ದುಡ್ಡು ಇಡಲಾಗಿತ್ತು.
ನಂತರ ನಡೆದ ಪೂಜೆಯಲ್ಲಿ ಕುಂಕುಮ ಹಚ್ಚಿ ಆರತಿ ಬೆಳಗಲಾಯಿತು. ಅಲ್ಲದೇ ಕೊಟ್ಟಿಗೆಯಲ್ಲಿ ಗೋಪಾಲಕ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಪೂಜಿಸಿ ಪ್ರಸಾದ ವಿತರಿಸಲಾಯಿತು.
ಗ್ರಾಮೀಣ ಭಾಗದಲ್ಲಿ ಗೋವುಗಳನ್ನು ಪೂಜಿಸಿದ ಬಳಿಕ ಸಮೀಪದ ಗದ್ದೆಗಳಿಗೆ ಮೇಯಲು ಬಿಡಲಾಯಿತು. ಗದ್ದೆಯಲ್ಲಿ ಗೋವುಗಳ ಕೊರಳಿಗೆ ಕಟ್ಟಿದ ಕಂಕಣ ಕೀಳುವ ಸ್ಪರ್ಧೆ ತಾಲ್ಲೂಕಿನ ವಿವಿಧೆಡೆ ನಡೆಯಿತು.
ಯಾರು ಗೋವನ್ನು ತಡೆದು ಮೊದಲಿಗೆ ಕಂಕಣವನ್ನು ಕಿತ್ತುಕೊಳ್ಳುತ್ತಾರೋ ಅವರಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಗ್ರಾಮೀಣ ಜನರಲ್ಲಿದೆ. ಹೀಗಾಗಿ ಗೋವುಗಳ ಕೊರಳಲ್ಲಿರುವ ಕಂಕಣ ಕೀಳಲು ಯುವಕರಾದಿಯಾಗಿ ಹಲವರು ಮುಗಿಬಿದ್ದರು.