ಕೆ.ಆರ್.ನಗರ: ‘ವಿಧಾನಸೌಧ ಕಟ್ಟಡ ನಿರ್ಮಾಣದ ವಜ್ರಮಹೋತ್ಸವ ಸಂದರ್ಭ ಶಾಸಕರಿಗೆ ಚಿನ್ನ- ಬೆಳ್ಳಿ ಬಿಸ್ಕತ್ ನೀಡುವ ಮಾತು ಈಗ ಎಲ್ಲೆಡೆ ಚರ್ಚಾಸ್ಪದವಾಗಿದೆ. ಆದರೆ, ಇಂಥ ಮೌಲ್ಯಯುತ ಉಡುಗೊರೆ ಪಡೆಯಲು ಶಾಸಕರ ಕೊಡುಗೆ ಏನಿದೆ?’ ಎಂದು ಜೆಡಿಎಸ್ ಮುಖಂಡ ಅಡಗೂರು ಎಚ್. ವಿಶ್ವನಾಥ್ ಪ್ರಶ್ನಿಸಿದರು.
ಪಟ್ಟಣದ ಕಾಗಿನೆಲೆ ಮಠದ ಆವರಣದಲ್ಲಿ ಅಂದಾಜು ₹6 ಕೋಟಿ ವೆಚ್ಚದ ‘ಕನಕ ಭವನ’ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಹನುಮಂತಯ್ಯ ಅವರು ಕೈದಿಗಳನ್ನು ಬಳಸಿಕೊಂಡು ಕೇವಲ ₹ 1.80 ಕೋಟಿ ವೆಚ್ಚದಲ್ಲಿ ವಿಧಾನಸೌಧ ನಿರ್ಮಿಸಿದ್ದಾರೆ. ಆದರೆ, ಅದರ ವಜ್ರಮಹೋತ್ಸಕ್ಕೆ ₹ 28ಕೋಟಿ ಖರ್ಚು ಮಾಡುವುದು ಹುಡುಗಾಟವಲ್ಲ’ ಎಂದರು.
‘ಸರ್ಕಾರಿ ಕೆಲಸ ದೇವರ ಕೆಲಸ’ ಎಂದು ವಿಧಾನಸೌಧ ಕಟ್ಟಡ ಮೇಲೆ ಬರೆಯಲಾಗಿದೆ. ಆದರೆ, ಇಂದಿನ ಸಭಾಪತಿಗಳಿಂದ ಸರ್ಕಾರಿ ದುಡ್ಡು ಎಲ್ಲರ ದುಡ್ಡು, ಸರ್ಕಾರಿ ಕೆಲಸ ಯಾರ ಕೆಲಸವೂ ಅಲ್ಲ ಎನ್ನುವಂತಾಗಿದೆ’ ಎಂದು ಮೂದಲಿಸಿದರು.
‘ಸಭಾಪತಿ ಹುದ್ದೆ ಬಹಳ ಎತ್ತರದಲ್ಲಿದೆ. ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಸಭಾಪತಿಗಳ ಪೀಠಕ್ಕೆ ಹೋಗಬೇಕೇ ಹೊರತು; ಸಭಾಪತಿಗಳು ಮುಖ್ಯಮಂತ್ರಿಗಳ ಪೀಠಕ್ಕೆ ಬರುವ ಹಾಗಿಲ್ಲ. ಆದರೆ, ನಮ್ಮ ಸಭಾಪತಿಗಳು ಮುಖ್ಯಮಂತ್ರಿಗಳ ಮನೆಗೇ ಹೋಗಿ ಸಂಸದೀಯ ಪದ್ಧತಿಗೆ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಿದರು.
ಅವರೇನು ಬಕಾಸುರರೇ?: ‘ಮಳೆಯಿಂದ ಇಡೀ ಬೆಂಗಳೂರು ಜನ ತತ್ತರಿಸಿಹೋಗಿದ್ದಾರೆ. ಇಂಥದರಲ್ಲೂ ದುಂದುವೆಚ್ಚಕ್ಕೆ ಮುಂದಾಗಿರುವುದು ಸರಿಯೇ? ಹೂವಿನ ಅಲಂಕಾರಕ್ಕೆ ₹ 1.50 ಕೋಟಿ, ಊಟಕ್ಕೆ ₹ 3.50 ಕೋಟಿ, ಅಂದರೆ ಒಂದು ಊಟಕ್ಕೆ ₹ 3,700 ನಿಗದಿ ಮಾಡಿದ್ದಾರೆ. ಅಲ್ಲಿ ಊಟ ಮಾಡುವವರೇನು ಬಕಾಸೂರರೇ?’ ಎಂದು ವಿಶ್ವನಾಥ್ ಪ್ರಶ್ನಿಸಿದರು.
ಶಿವಾನಂದಪುರಿ ಸ್ವಾಮೀಜಿ, ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ದೊಡ್ಡಸ್ವಾಮೇಗೌಡ, ಕಾಂಗ್ರೆಸ್ ಮುಖಂಡರಾದ ಅನುರಾಧಾ ಮಹದೇವ್, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷೆ ಐಶ್ವರ್ಯ ಮಹದೇವ್, ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಶಿವಣ್ಣ, ನಿರ್ದೇಶಕರಾದ ನಾಗರಾಜ್, ಕಾಳೇನಹಳ್ಳಿ ಅಪ್ಪಾಜಿಗೌಡ, ರಾಮಕೃಷ್ಣೇಗೌಡ, ಮುಖಂಡರಾದ ಜಿ.ಆರ್.ರಾಮೇಗೌಡ, ಜಿ.ಪಂ ಮಾಜಿ ಸದಸ್ಯ ಜಯರಾಮ, ಗರುಡಗಂಬ ಸ್ವಾಮಿ, ಹೆಬ್ಬಾಳು ರಾಜಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.