ಬಿಡದಿ (ರಾಮನಗರ): ‘ಪ್ರಜ್ವಲ್ ರೇವಣ್ಣ ಮಾಧ್ಯಮಗಳ ಮುಂದೆ ಮಾತನಾಡುವುದನ್ನು ಕೆಲವರು ಮನೋರಂಜನೆ ಎಂದುಕೊಂಡಿದ್ದಾರೆ. ಅಂತಹದ್ದನ್ನು ನಾನು ಪ್ರೋತ್ಸಾಹಿಸುವುದಿಲ್ಲ’ ಎಂದು ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಇಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನಗೆ ಬೆಳೆಸುವುದೂ ಗೊತ್ತಿದೆ. ತೀರಾ ಚೇಷ್ಟೆ ಮಾಡಿದರೆ ಹೊರಹಾಕುವುದೂ ಗೊತ್ತಿದೆ’ ಎಂದು ಎಚ್ಚರಿಸಿದರು.
‘ಪ್ರಜ್ವಲ್ ರಾಜಕಾರಣಕ್ಕೆ ಬರುವುದನ್ನು ಯಾರೋ ತಪ್ಪಿಸಲು ಆಗದು. ಆದರೆ, ಅವನಂತೆಯೇ ಸಾಕಷ್ಟು ಯುವಕರು ಪಕ್ಷದಲ್ಲಿ ಇದ್ದಾರೆ. ನಿಖಿಲ್ ಕೂಡ ಪಕ್ಷದ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಎಲ್ಲರಿಗೂ ಸೂಕ್ತ ಸಮಯದಲ್ಲಿ ಅವಕಾಶ ದೊರೆಯಲಿದೆ’ ಎಂದರು.
ಅನಿತಾ ಸ್ಪರ್ಧೆ ಇಲ್ಲ: ‘ಕಾರ್ಯಕರ್ತರು ಏನೇ ಒತ್ತಡ ಹೇರಿದರೂ ಚನ್ನಪಟ್ಟಣದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.