ಬೆಂಗಳೂರು: ‘ಗ್ಲೋಬಲ್ ರೆಡ್ಡಿ ಕನ್ವೆನ್ಷನ್ ಸಂಸ್ಥೆ ವತಿಯಿಂದ ನವೆಂಬರ್ 11 ಹಾಗೂ 12ರಂದು ರೆಡ್ಡಿ ಜನಾಂಗದ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆಯ ಸಂಯೋಜಕ ಎಚ್.ಎನ್.ಮಂಜುನಾಥ್ ತಿಳಿಸಿದರು.
ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೆಲಂಗಾಣದ ಹೈದರಾಬಾದ್ನ ಜೆ.ವ್ಯಾಲಿ ರೆಸಾರ್ಟ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಜಗತ್ತಿನಾದ್ಯಂತ ನೆಲೆಸಿರುವ ರೆಡ್ಡಿ ಜನಾಂಗದ ಸದಸ್ಯರನ್ನು ಒಗ್ಗೂಡಿಸಲು ಈ ಸಮಾವೇಶ ಹಮ್ಮಿಕೊಂಡಿದ್ದೇವೆ’ ಎಂದು ಹೇಳಿದರು.
‘ಜನಾಂಗದವರ ಕುಂದುಕೊರತೆ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಬೆಳವಣಿಗೆ, ಸಮುದಾಯದಲ್ಲಿ ಹಿಂದುಳಿದ ಜನರನ್ನು ಮುಖ್ಯವಾಹಿನಿಗೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ವಿವಾಹ ಕುದುರಿಸುವುದಕ್ಕೂ ಸಮಾವೇಶವು ಸೇತುವೆಯಾಗಲಿದೆ’ ಎಂದರು.
ಕೆ.ಸಿ.ರೆಡ್ಡಿ ಫೌಂಡೇಷನ್ನ ಕಾರ್ಯದರ್ಶಿ ವಸಂತ ಕವಿತಾ, ‘ವಿಧಾನಸೌಧದ ವಜ್ರ ಮಹೋತ್ಸವದ ಸಂದರ್ಭದಲ್ಲಿ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪ್ರತಿಮೆ ಪ್ರತಿಷ್ಠಾಪಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇವೆ. ಕಾನೂನು ತೊಡಕು ನಿವಾರಣೆಯಾದ ಬಳಿಕ ಪ್ರತಿಮೆ ಪ್ರತಿಷ್ಠಾಪನೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದರು.
‘ರಾಜ್ಯದಲ್ಲಿ 60 ಲಕ್ಷ ರೆಡ್ಡಿ ಜನಾಂಗದವರಿದ್ದಾರೆ. ಈ ಜನಾಂಗವನ್ನು ‘ಪ್ರವರ್ಗ 2ಎ’ಗೆ ಸೇರಿಸುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು.