ಶ್ರೀನಗರ: ಜಮ್ಮು ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ಕಮಲ್ ಕೋಟ್ ಪ್ರದೇಶದ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಸೇನಾ ಸಹಾಯಕ ಮೃತಪಟ್ಟು ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ.
‘ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘನೆಯಾಗಿದೆ. ವಿವೇಚನಾರಹಿತ ಗುಂಡಿನ ದಾಳಿಯಲ್ಲಿ ಸೇನಾ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ನಾಗರಿಕನೊಬ್ಬ ಮೃತಪಟ್ಟಿದ್ದಾನೆ. ಭಾರತದ ಸೇನೆಯು ಈ ದಾಳಿಗೆ ಸರಿಯಾಗಿ ಪ್ರತ್ಯುತ್ತರ ನೀಡಿದೆ’ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.
ದಾಳಿಯಲ್ಲಿ ಗಾಯಗೊಂಡ ಬಾಲಕಿಗೆ ಉರಿ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವರ್ಷದಲ್ಲಿ ಪಾಕಿಸ್ತಾನ ಹಲವು ಬಾರಿ ಕದನವಿರಾಮ ಉಲ್ಲಂಘಿಸಿ ದಾಳಿ ನಡೆಸಿದೆ. ಅಕ್ಟೋಬರ್ 12 ರಂದು ಪೂಂಚ್ ಜಿಲ್ಲೆಯ ಗಡಿ ಭದ್ರತಾ ರೇಖೆಯನ್ನು ಉಲ್ಲಂಘಿಸಿ ಪಾಕಿಸ್ತಾನ ನಡೆಸಿದ ಷೆಲ್ ದಾಳಿಯಲ್ಲಿ ಒಬ್ಬ ಯೋಧ ಮತ್ತು ಒಬ್ಬ ಸಹಾಯಕ ಮೃತಪಟ್ಟು ಆರು ಮಂದಿ ಗಾಯಗೊಂಡಿದ್ದರು.
ಇದೇ 18ರಂದು ಪೂಂಚ್ ಮತ್ತು ರಜೌರಿ ಜಿಲ್ಲೆಯಲ್ಲಿ ನಡೆಸಿದ ಷೆಲ್ ದಾಳಿಯಲ್ಲಿ ಎರಡು ವರ್ಷದ ಬಾಲಕಿ ಸೇರಿ ಎಂಟು ಮಂದಿ ನಾಗರಿಕರು ಗಾಯಗೊಂಡಿದ್ದರು.