ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ಹೆಚ್ಚು ಮಳೆ ; ದ್ರಾಕ್ಷಿಗೆ ತುಪ್ಪಟ ರೋಗದ ಕಾಟ

Last Updated 22 ಅಕ್ಟೋಬರ್ 2017, 3:50 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ದ್ರಾಕ್ಷಿ ಬಳ್ಳಿಗೆ ಬೂಜು ತುಪ್ಪಟ ರೋಗ (ಡೌನಿ ಮಿಲ್ಡಿವ್) ಹೆಚ್ಚಾಗಿ ಕಾಣಿಸಿಕೊಂಡಿದೆ. ಇದು ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಎಲೆಗಳ ಹಿಂಭಾಗದಲ್ಲಿ ಬಿಳಿ ತುಪ್ಪಟದಂತಹ ಶಿಲೀಂದ್ರ ಬೆಳೆಯುತ್ತಿದ್ದಂತೆಯೇ ಎಲೆ ಒಣಗಿ ಬಾಡುತ್ತದೆ. ಜೊತೆಗೆ ಗೊಂಚಲುಗಳಲ್ಲಿ ಹಣ್ಣುಗಳು ಮುದುರಿ ಜೋತು ಬೀಳುವುದು ಕಂಡುಬರುತ್ತಿದೆ.

ಆಗಸ್ಟ್ ತಿಂಗಳ ಮಧ್ಯದಿಂದ ಸೆಪ್ಟೆಂಬರ್‌ವರೆಗೆ ಚಾಟನಿ ಮಾಡಿದ ತಾಕುಗಳಲ್ಲಿ ರೋಗದ ಬಾಧೆ ತೀವ್ರವಾಗಿರುವುದು ಕಂಡು ಬಂದಿದೆ. ಅಧಿಕ ಮಳೆಯಿಂದ ವಾತಾವರಣದಲ್ಲಿ ಮತ್ತು ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು ಇದು ರೋಗ ಉಲ್ಬಣಕ್ಕೆ ಅನುಕೂಲಕರವಾಗಿದೆ. ಇದೇ ವಾತಾವರಣ ಮುಂದುವರೆದಲ್ಲಿ ರೋಗದ ತೀವ್ರತೆ ಹೆಚ್ಚಾಗುವ ಸಂಭವವಿದೆ ಎಂದು ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ರೋಗ ನಿಯಂತ್ರಣಕ್ಕೆ ಸಲಹೆ: ಚಾಟನಿ ಮಾಡುವ ಪೂರ್ವದಲ್ಲಿ ತಾಕುಗಳಿಗೆ ಶೇಕಡಾ 1 ರ ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು. ಚಾಟನಿ ಮಾಡಿದ ನಂತರ ತಕ್ಷಣ ಎಲೆ ಮತ್ತು ಕಡ್ಡಿಗಳನ್ನು ತಾಕಿನಿಂದ ಆಯ್ದು ನಾಶಪಡಿಸಬೇಕು. ಹೈಡ್ರೋಜನ್ ಸೈನಾಮೈಡ್ ಕಡ್ಡಿಗಳಿಗೆ ಲೇಪಿಸುವಾಗ, ಅದರ ಜೊತೆಗೆ ಶಿಲೀಂದ್ರನಾಶಕ ಮ್ಯಾಂಕೋಜೆಬ್ (6 ರಿಂದ 8 ಗ್ರಾಂ ಪ್ರತಿ ಲೀಟರ್ ನೀರಿಗೆ) ಬೆರೆಸಬೇಕು.

ಚಾಟನಿ ಮಾಡಿದ 24 ಗಂಟೆಗಳ ಒಳಗೆ ಶೇಕಡಾ 1 ರ ಬೋರ್ಡೊ ದ್ರಾವಣ ತಪ್ಪದೇ ಸಿಂಪಡಿಸಬೇಕು. ಮೂರನೇ ಎಲೆ ಹಂತದಲ್ಲಿ (ಚಾಟನಿಯ ನಂತರ ಸುಮಾರು 15 ದಿನಗಳು) ನಂತರ 5-ರಿಂದ 10 ದಿನಗಳ ಅಂತರದಲ್ಲಿ ಇನ್ನೆರಡು ಬಾರಿ ಸಿಂಪರಣೆ ಮಾಡಬೇಕಾಗುತ್ತದೆ. ಪ್ರತಿ ಲೀಟರ್‌ ನೀರಿಗೆ 2.50 ಗ್ರಾಮ್‌ನಷ್ಟು ಮೆಟಲಾಕ್ಸಲ್+ಮ್ಯಾಂಕೋಜೆಬ್ ಶಿಲೀಂಧ್ರ ನಾಶಕ ಸಿಂಪಡಿಸಬೇಕು.

ಟೈಕ್ರೋಡರ್ಮಾ ಅಥವಾ ಬ್ಯಾಸಿಲಸ್ ಜೈವಿಕ ರೋಗ ನಾಶಕಗಳನ್ನು ಪ್ರತಿ ಎಕರೆಗೆ ಒಂದು ಕೆ.ಜಿಯಂತೆ ಹನಿ ನೀರಾವರಿ ಮೂಲಕ ಗಿಡದ ಬೇರುಗಳಿಗೆ ನೀಡಬೇಕು. ಮಳೆಯಾದ ಸಂದರ್ಭದಲ್ಲಿ ತಾಕಿನಲ್ಲಿ ನಿಂತ ನೀರನ್ನು ಬಸಿದು ಹೋಗುವ ಹಾಗೆ ಮೊದಲೇ ಬಸಿಗಾಲುವೆ ತೆಗೆದು ನೀರು ಹೊರಹೋಗುವಂತೆ ನೋಡಿಕೊಳ್ಳಬೇಕು.

ಇದಲ್ಲದೆ ಒಂದೇ ಪ್ರದೇಶದಲ್ಲಿ ಹಲವಾರು ದ್ರಾಕ್ಷಿ ತಾಕುಗಳಿದ್ದಲ್ಲಿ ದ್ರಾಕ್ಷಿ ಬೆಳೆಗಾರರು ಏಕಕಾಲದಲ್ಲಿ ಚಾಟನಿ, ಪೀಡೆನಾಶಕಗಳ ಸಿಂಪರಣೆ, ಜೈವಿಕ ಪೀಡೆನಾಶಕಗಳ ಬಳಕೆ ಹಾಗು ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡುವುದು ಅಗತ್ಯವಿದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT