ಯಳಂದೂರು: ಉಪ್ಪಾರ ಜನಾಂಗದ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ಹೆಚ್ಚು ಅನುದಾನ ಬಿಡುಗಡೆ ಮಾಡಿ, ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ಎಸ್. ಜಯಣ್ಣ ತಿಳಿಸಿದರು ಅವರು ಸಮೀಪದ ಇರಸವಾಡಿ ಗ್ರಾಮದ ಉಪ್ಪಾರರ ಹೊಸ ಬಡಾವಣೆಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಉಪ್ಪಾರ ಜನಾಂಗವು ಶ್ರಮಿಕ ವರ್ಗವಾಗಿದೆ. ಆದರೆ, ಆರ್ಥಿಕವಾಗಿ ಸಬಲರಾಗಿಲ್ಲ. ಇವರ ಬಡಾವಣೆಯಲ್ಲಿ ಅನೇಕ ಮೂಲ ಸೌಲಭ್ಯಗಳ ಕೊರತೆ ಇದೆ. ಕೆಲವು ಕಡೆ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಇರಸವಾಡಿ ಹಾಗೂ ಸುತ್ತೂರು ಗ್ರಾಮಗಳಲ್ಲಿ ಶಾಸಕರ ನಿಧಿಯ 30-54 ಯೋಜನೆಯಡಿ ₹ 20 ಲಕ್ಷ ಹಣವನ್ನು ನೀಡಲಾಗಿದ್ದು ಸುಸಜ್ಜಿತ ರಸ್ತೆ ಹಾಗೂ ಚರಂಡಿಯನ್ನು ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ನೀಡಿ ಬಡಾವಣೆಯ ಇತರೆ ಬೀದಿಗಳನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಜಿ.ಪಂ. ಸದಸ್ಯ ಕೆ.ಪಿ. ಸದಾಶಿವಮೂರ್ತಿ, ತಾ.ಪಂ. ಅಧ್ಯಕ್ಷ ಎಚ್.ವಿ. ಚಂದ್ರು, ಸದಸ್ಯೆ ಶಿವಮ್ಮ ಅಶೋಕ್ ಗ್ರಾ.ಪಂ. ಅಧ್ಯಕ್ಷ ರವಿ, ಸದಸ್ಯರಾದ ಪಿ. ಸುಜಾತ ಶಿವಶಂಕರ್, ರಂಗಸ್ವಾಮಿ, ನಾಗಶೆಟ್ಟಿ ಮುಖಂಡರಾದ ಹೊಂಗನೂರು ಜಯರಾಜು, ಸುರೇಶ್, ಡಿ. ನಾಗರಾಜು ಇದ್ದರು.