ಅಫಜಲಪುರ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ ಬೆಳೆ ಹೂಬಿಡುವ ಹಂತ ಮತ್ತು ಚಿಗುರು ಕಾಯಿ ಕಟ್ಟುವ ಹಂತದಲ್ಲಿದೆ. 15 ದಿನಗಳಿಂದ ಮಂಜು ಮತ್ತು ಅತಿಯಾದ ಮಳೆಯಿಂದ ತೊಗರಿಗೆ ನಟೆ ರೋಗವೂ ಬರುತ್ತಿದೆ.
‘ಮುಂಜಾನೆ ಮತ್ತು ಸಾಯಂಕಾಲ ಮಂಜು ಬೀಳುತ್ತಿರುವುದರಿಂದ ತೊಗರಿ ಬೆಳೆಯ ಬೆಳೆಯುವ ಕುಡಿ ಕಮರಿ ಹೋಗುತ್ತಿದ್ದು, ಇನ್ನೊಂದು ಕಡೆ ಹೂವುಗಳು ಉದರುತ್ತಿವೆ. ಇನ್ನೊಂದು ಕಡೆ ಅತಿಯಾದ ಮಳೆಯಿಂದ ಜವಳ ಭೂಮಿ ಮತ್ತು ಕರಲ ಭೂಮಿಯಲ್ಲಿ ಬಿತ್ತನೆ ಮಾಡಿರುವ ತೊಗರಿ ಬೆಳೆ ನೆಟೆ ಹೋಗುತ್ತಿದೆ. ಮಳೆ ಬಂದರೂ ಸಹ ಬೆಳೆಗೆ ಪ್ರಯೋಜನವಾಗುತ್ತಿಲ್ಲ’ ಎಂದು ರೈತರು ಹೇಳುತ್ತಾರೆ.
‘ಮಂಜು ದಿನಾಲೂ ಬೀಳುತ್ತಿರುವದ ರಿಂದ ಬೆಳೆಯುತ್ತಿರುವ ತೊಗರಿಯ ಕುಡಿ ಕಮರಿ ಹೋಗುತ್ತಿದೆ. ತೇವಾಂಶ ಹೆಚ್ಚಳದಿಂದ ನೆಟೆರೋಗ ಬಂದಿದೆ. 2 ತಿಂಗಳು ಮಳೆಯಿಲ್ಲದೇ ಬೆಳೆಗಳ ಕುಂಠಿತವಾಯಿತು. ಅಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಳೆ ಬಂದಿದ್ದರಿಂದ ಮಳೆ ಹಾಳಾಯಿತು. ನಮಗೆ ಮಳೆ ಬಂದರೂ ಪ್ರಯೋಜನವಾಗಲಿಲ್ಲ’ ಎಂದುಬಳೂರ್ಗಿ ಗ್ರಾಮದ ರೈತರಾದ ರಮೇಶ ಪಾಟೀಲ, ಧರ್ಮರಾಯ ಹೌದಿ ಹೇಳುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ‘ತಾಲ್ಲೂಕಿನಲ್ಲಿ 45,250 ತೊಗರಿ ಬಿತ್ತನೆ ಗುರಿ ಹೊಂದಲಾಗಿತ್ತು. ಆ ಪೈಕಿ 36,280 ಹೆಕ್ಟೇರ್ನಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಮಂಜಿನಿಂದ ತೊಗರಿ ಕಮರುತ್ತಿರುವದು ನಿಜ.
ನೆಟೆ ಹೊಡೆದ ತೊಗರಿ ಹೊಲದಲ್ಲಿ ಕಡಲೆ ಬಿತ್ತನೆ ಮಾಡಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಕಡಲೇ ಬೀಜ ಸಹಾಯಧನ ನೀಡಲಾಗುತ್ತಿದೆ’ ಎಂದು ತಿಳಿಸಿದರು. 3–4 ದಿನ ಮಳೆ ಬಿಸಿಲು ಆವರಿಸಿತ್ತು. ರೈತರು ಕಡಲೆ, ಜೋಳ ಬಿತ್ತನೆ ಮಾಡಬೇಕು ಎಂದು ತಯಾರಿ ಮಾಡಿಕೊಂಡರೆ ಮತ್ತೆ ಶನಿವಾರ ಮೋಡಕಂಡು ರೈತರು ಆತಂಕಪಟ್ಟರು.