ಕಲಬುರ್ಗಿ: ಕಲಬುರ್ಗಿ–ಬೀದರ್ ಮಧ್ಯದ 104 ಕಿ.ಮೀ. ಉದ್ದದ ನೂತನ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅ.29ರಂದು ಬೀದರ್ನಲ್ಲಿ ನಡೆಯುವ ಸಮಾರಂಭದಲ್ಲಿ ಇದನ್ನು ಲೋಕಾರ್ಪಣೆಗೊಳಿಸಲಿದ್ದು, ಈ ಭಾಗದ ಜನರ ಬಹು ವರ್ಷಗಳ ಕನಸು ನನಸಾಗಲಿದೆ.
ಈ ಯೋಜನೆಗೆ ಚಾಲನೆ ದೊರೆತಿದ್ದು 1999ರಲ್ಲಿ. ಅನುದಾನದ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿತ್ತು. ಕಲಬುರ್ಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ಅಗತ್ಯ ಅನುದಾನ ನೀಡಿ ಕಾಮಗಾರಿಗೆ ಚುರುಕು ನೀಡಿದ್ದರು.
ಸುರಂಗ ಮಾರ್ಗ: ಬೀದರ್ನಿಂದ ಹುಮನಾಬಾದ್ ವರೆಗೆ ಹಾಗೂ ಕಲಬುರ್ಗಿಯಿಂದ ಮಹಾಗಾಂವ ವರೆಗೆ ಈ ಹಿಂದೆಯೇ ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗದ ಸುರಕ್ಷತೆ ಪರಿಶೀಲನೆಯೂ ನಡೆದಿದೆ. ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳ ಗಡಿಯಲ್ಲಿರುವ ಮರಗುತ್ತಿ ಗ್ರಾಮದ ಸಮೀಪ 1.67 ಕಿ.ಮೀ. ಉದ್ದದ ಸುರಂಗ ಮಾರ್ಗ ಕಾಮಗಾರಿ ಈಗ ಪೂರ್ಣಗೊಂಡಿದೆ. ಈ ಸುರಂಗ ಮಾರ್ಗಕ್ಕೇ ಅಂದಾಜು ₹75 ಕೋಟಿ ವ್ಯಯಿಸಲಾಗಿದೆ.
‘ಈ ಸುರಂಗ ಮಾರ್ಗದಲ್ಲಿ ಹಳಿ ಜೋಡಣೆ ಮುಕ್ತಾಯಗೊಂಡಿದೆ. ವಿದ್ಯುತ್ತೀಕರಣ ಕಾಮಗಾರಿ ಮುಗಿಯುವ ಹಂತದಲ್ಲಿದೆ’ ಎಂದು ಸೈಟ್ ಎಂಜಿನಿಯರ್ ಪ್ರಶಾಂತ ಸೇಡಂ ತಿಳಿಸಿದರು. ಕಲಬುರ್ಗಿ–ಬೀದರ್ ಮಧ್ಯೆ 13 ನೂತನ ರೈಲು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಕಲಬುರ್ಗಿ ಬಳಿಯ ತಾಜಸುಲ್ತಾನಪುರ ಬಳಿ ಗೂಡ್ಸ್ ಶೆಡ್ ನಿರ್ಮಾಣವೂ ಪೂರ್ಣಗೊಂಡಿದೆ.
ಕೇಂದ್ರೀಯ ರೈಲು ಸುರಕ್ಷತಾ ಆಯುಕ್ತರು ಹುಮನಾಬಾದ್ನಿಂದ ಹಳ್ಳಖೇಡ (ಕೆ)ವರೆಗಿನ ಮಾರ್ಗದಲ್ಲಿ ಶನಿವಾರ ಪ್ರಯೋಗಿಕ ರೈಲಿನಲ್ಲಿ ಸಂಚರಿಸಿ ಹಳಿ ಕಾಮಗಾರಿ ಪರಿಶೀಲಿಸಿದರು. ಭಾನುವಾರ ಹಳ್ಳಿಖೇಡ್ (ಕೆ)ಯಿಂದ ಕಮಲಾಪುರ ವರೆಗಿನ ಕಾಮಗಾರಿ ಪರಿಶೀಲನೆ ನಡೆಸಲಿದ್ದಾರೆ. ಕಾಮಗಾರಿಯ ವಿಳಂಬದಿಂದಾಗಿ ಈ ಮಾರ್ಗಕ್ಕೆ ಮೂಲ ಯೋಜನಾ ಮೊತ್ತದ ನಾಲ್ಕು ಪಟ್ಟು ಹಣ ವ್ಯಯವಾಗಿದೆ.