ನಂಜನಗೂಡು: ತಾಲ್ಲೂಕಿನ ಕಾರ್ಯ ಗ್ರಾಮದಲ್ಲಿ ಶನಿವಾರ ಇತಿಹಾಸ ಪ್ರಸಿದ್ಧ ಕಾರ್ಯ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಗ್ರಾಮದ ಗದ್ದಿಗೆ ಆವರಣದಲ್ಲಿ ಸಿದ್ದೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ವಿವಿಧ ಬಗೆಯ ಹೂವು ಹಾಗೂ ಹೊಂಬಾಳೆಗಳಿಂದ ಅಲಾಂಕೃತಗೊಳಿಸಿದ ರಥೋತ್ಸವಕ್ಕೆ ಸಂಸದ ಆರರ್.ಧ್ರುವನಾರಾಯಣ ಚಾಲನೆ ನೀಡಿದರು.
ಮಂಗಳವಾದ್ಯದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು, ಮಧ್ಯಾಹ್ನ 2 ಗಂಟೆ ವೇಳೆಗೆ ಬೆಟ್ಟದ ಹತ್ತಿರ ತರಲಾಯಿತು. ನೆರೆದಿದ್ದ ಭಕ್ತರು ‘ಉಘೇ ಉಘೇ ಸಿದ್ಧೇಶ್ವರ; ಎಂದು ಘೋಷಣೆ ಮಾಡಿ ಬರಮಾಡಿಕೊಂಡರು.
ಊರಿನ ಹೊರಭಾಗದಲ್ಲಿ ರಥದಿಂದ ಖುರ್ಜನ್ನು ಬೇರ್ಪಡಿಸಿ, ಬೆಟ್ಟಕ್ಕೆ ಸ್ವಾಮಿಯ ಉತ್ಸವಮೂರ್ತಿ ತರಲಾಯಿತು. ನವ ದಂಪತಿಗಳು ಹಣ್ಣು– ಧವನ ಎಸೆದು ಹರಕೆಯನ್ನು ತೀರಿಸಿದರು.
ರೈತರಿಂದ ಪಂಜಿನ ಸೇವೆ: ಬೆಟ್ಟದ ಮೇಲಿನ ಬಸವನ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಬೆಳಗಿನಿಂದ ಅಕ್ಕ ಪಕ್ಕದ ಗ್ರಾಮಗಳ ರೈತರು ಸೇರಿದ್ದರು. ಎತ್ತಿನ ಬಂಡಿ ಕಟ್ಟಿಕೊಂಡು, ಜಾನುವಾರು ಸಮೇತ ಸೇರಿದ ರೈತರು; ಪ್ರತೀತಿಯಂತೆ ಜಾನುವಾರುಗಳಿಗೆ ಯಾವುದೇ ರೋಗ ಬರದಂತೆ ಪಂಜಿನ ಸೇವೆ ಸಲ್ಲಿಸಿದರು.
ತಾಲ್ಲೂಕಿನ ವಿವಿಧ ಭಾಗಗಳಿಂದ ಬಸ್, ಟೆಂಟೊ ಮೂಲಕ ಸಾವಿರಾರು ಭಕ್ತರು ಆಗಮಿಸಿದ್ದರು. ಬೆಟ್ಟದ ಮೇಲೆ ಕುಡಿಯಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತಾದರೂ ಅದು ಸಮರ್ಪಕವಾಗಿರಲಿಲ್ಲ. ಇದರಿಂದ ಭಕ್ತರು ನೀರಿಗಾಗಿ ಪರದಾಡುವಂತಾಯಿತು. ಬಿಸಿಲಿನ ಝಳಕ್ಕೆ ತಂಪು ಪಾನೀಯಗಳ ವ್ಯಾಪಾರ ಜೋರಾಗಿ ನಡೆಯಿತು.
ಕಾರೇಪುರ, ತಗಡೂರು, ಚಿನ್ನಂಬಳ್ಳಿ, ಕಾಮಹಳ್ಳಿ, ಬಾಣೂರು, ಹನುಮನಪುರ, ಚುಂಚನಹಳ್ಳಿ, ಅರಳಿಕಟ್ಟೆಹುಂಡಿ ಗ್ರಾಮಗಳಲ್ಲಿ ಈ ಕಾರ್ಯ ಸಿದ್ಧೇಶ್ವರಸ್ವಾಮಿಯ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಏರ್ಪಡಿಸಲಾಗಿತ್ತು.