ಬೆಂಗಳೂರು: ದೀಪಾವಳಿ ಹಬ್ಬದ ಶುಭಾಶಯ ಹೇಳುವ ನೆಪದಲ್ಲಿ ಬಾಡಿಗೆದಾರರ ಮನೆಗೆ ತೆರಳಿ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಮುತ್ತಿಕ್ಕಿದ ಆರೋಪದಡಿ 84 ವರ್ಷದ ವೃದ್ಧರೊಬ್ಬರನ್ನು ಬಂಧಿಸಿದ ಬನಶಂಕರಿ ಪೊಲೀಸರು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಮಧ್ಯಪ್ರದೇಶದ ಮೂವರು ಯುವತಿಯರು, ಆರು ತಿಂಗಳ ಹಿಂದೆ ನಗರಕ್ಕೆ ಬಂದು ಆರೋಪಿಯ ಮನೆಯನ್ನು ಬಾಡಿಗೆ ಪಡೆದು ವಾಸವಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ಒಬ್ಬಾಕೆ ವಾರದ ಹಿಂದೆಯೇ ಊರಿಗೆ ಹೋಗಿದ್ದಳು. ಹೀಗಾಗಿ, ಸಂತ್ರಸ್ತೆ ಹಾಗೂ ಮತ್ತೊಬ್ಬ ಗೆಳತಿ ಮಾತ್ರ ಮನೆಯಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ.
‘ಅ.18ರ ಮಧ್ಯಾಹ್ನ 12.45ರ ಸುಮಾರಿಗೆ ಮನೆಗೆ ಬಂದ ಮಾಲೀಕರು, ಹಬ್ಬದ ಶುಭಾಶಯ ಹೇಳಿ ಸಿಹಿತಿಂಡಿ ಕೊಟ್ಟರು. ಈ ವೇಳೆ ಗೆಳತಿ ಮಹಡಿಯಲ್ಲಿ ಬಟ್ಟೆ ತೊಳೆಯುತ್ತಿದ್ದಳು. ಮನೆಯಲ್ಲಿ ಒಬ್ಬಳೇ ಇರುವುದನ್ನು ತಿಳಿದ ಮಾಲೀಕರು, ಮೊದಲು ಕೆನ್ನೆಯನ್ನು ಹಿಂಡಿದರು’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.
‘ನನ್ನ ತಾತನ ವಯಸ್ಸಿನವರು. ಅಕ್ಕರೆಯಿಂದ ಕೆನ್ನೆ ಮುಟ್ಟಿರಬಹುದು ಎಂದು ನಾನೂ ಸುಮ್ಮನಿದ್ದೆ. ಆದರೆ, ಏಕಾಏಕಿ ಬಾಗಿಲು ಹಾಕಿದ ಅವರು ನನ್ನ ಬಟ್ಟೆ ಎಳೆದಾಡಿ ಮುತ್ತುಕೊಟ್ಟರು. ಈ ವೇಳೆ ಅವರನ್ನು ತಳ್ಳಿ ಜೋರಾಗಿ ಕೂಗಿಕೊಂಡೆ.’
‘ಚೀರಾಟ ಕೇಳಿ ಗೆಳತಿ ಮಹಡಿಯಿಂದ ಓಡಿ ಬಂದಳು. ಮಾಲೀಕರ ಮಕ್ಕಳೂ ಮನೆಗೆ ಬಂದರು. ಆ ನಂತರ ಗೆಳತಿಯ ಸೂಚನೆಯಂತೆ ದೂರು ಕೊಟ್ಟಿದ್ದೇನೆ. ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ.
ಕುಟುಂಬ ಸದಸ್ಯರಿಗೆ ವಿಷಯ ಗೊತ್ತಾಗಿದ್ದರಿಂದ ಆರೋಪಿ ಮನೆ ಬಿಟ್ಟು ಹೋಗಿದ್ದರು. ನಂತರ ಸ್ಥಳೀಯರ ನೆರವಿನಿಂದ ಅದೇ ದಿನ ಸಂಜೆ ಸಮೀಪದ ಉದ್ಯಾನದಲ್ಲಿ ಅವರನ್ನು ವಶಕ್ಕೆ ಪಡೆದೆವು. ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸುವುದು (ಐಪಿಸಿ 354ಎ–2) ಹಾಗೂ ಅತಿಕ್ರಮ ಪ್ರವೇಶ (448) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.