ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಸ್‌.ಸಿ., ಎಸ್‌.ಟಿ, ಅಲ್ಪಸಂಖ್ಯಾತರಿಗೆ ಉದ್ಯೋಗ ಖಾತ್ರಿ’

Last Updated 23 ಅಕ್ಟೋಬರ್ 2017, 6:36 IST
ಅಕ್ಷರ ಗಾತ್ರ

ರೋಣ: ‘ಎಸ್‌.ಸಿ., ಎಸ್‌.ಟಿ. ಹಾಗೂ ಅಲ್ಪಸಂಖ್ಯಾತರು ಶಿಕ್ಷಣ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತಗೊಳ್ಳಬಾರದು. ಮುಖ್ಯವಾಗಿ ಅವರಿಗೆ ಉದ್ಯೋಗದಲ್ಲಿ ಖಾತ್ರಿ ಒದಗಿಸುವಂತಹ ಆಡಳಿತ ವ್ಯವಸ್ಥೆಗೆ ಸನ್ನದ್ಧವಾಗಿದ್ದೇವೆ’ ಎಂದು ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಎಸ್.ಸಿ.ಮಹೇಶ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಜರುಗಿದ ‘ಮುನ್ನೋಟ–2025’ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಸಾಮಾಜಿಕ ನ್ಯಾಯದಡಿ ಈ ಪಂಗಡಗಳಿಗಾಗಿ ಜಾರಿಗೆ ತಂದಿರುವ ಸೌಲಭ್ಯಗಳು ದೊರಕಬೇಕು ಎಂಬುದು ರಾಜ್ಯ ಸರ್ಕಾರದ ಇಚ್ಛೆಯಾಗಿದೆ. ಅಲ್ಲದೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಬಳಕೆಯಾಗಬೇಕಾದ ಅನುದಾನವನ್ನು ಆ ಜನಾಂಗಗಳ ಅಭಿವೃದ್ಧಿಗೆ ಬಳಕೆ ಮಾಡುವುದು ಇಲಾಖೆಗಳ ಕರ್ತವ್ಯ. ಇದನ್ನು ಅಧಿಕಾರಿಗಳು ಸೂಕ್ತವಾಗಿ ನಿಭಾಯಿಸಬೇಕು’ ಎಂದರು.

‘ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿರುವ ಎಸ್‌.ಸಿ, ಎಸ್‌.ಟಿ., ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಯುವಕರು ಹಾಗೂ ಯುವತಿಯರು ಪದವಿಯವರೆಗೆ ಶಿಕ್ಷಣ ಪಡೆಯುಂತಹ ವ್ಯವಸ್ಥೆ ಜಾರಿಗೆ ತರಲಾಗಿದೆ. ಜೊತೆಗೆ ಅವರಿಗೆ ಶೈಕ್ಷಣಿಕ ಪ್ರಗತಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ತಾಲ್ಲೂಕು ಆಡಳಿತ ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ಗ್ರಾಮದಲ್ಲಿ ಎಸ್ಎಸ್ಎಲ್‌ಸಿವರೆಗೆ ಶಿಕ್ಷಣ ಪಡೆದಿರುವವರನ್ನು ಗುರುತಿಸಿ ಅವರಿಗೆ ಹೆಚ್ಚಿನ ಶಿಕ್ಷಣ ಒದಗಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

‘ಈ ಜನಾಂಗಗಳ ಅಭಿವೃದ್ಧಿಗೆ ಯಾವ ರೀತಿಯ ಯೋಜನೆಗಳನ್ನು ಜಾರಿಗೆ ತರಬೇಕು ಮತ್ತು ಗುಡಿ ಕೈಗಾರಿಕೆಗಳನ್ನು ಹೇಗೆ ಉತ್ತೇಜಿಸಬೇಕು ಎಂಬ ಮಾಹಿತಿಯನ್ನು ಜನಪ್ರತಿನಿಧಿಗಳು ನೀಡಬೇಕು. ಅಲ್ಲದೆ ತಾಲ್ಲೂಕಿನಲ್ಲಿ ಪ್ರವಾಸಿ ತಾಣಗಳನ್ನು ಗುರುತಿಸುವ ಬಗ್ಗೆಯೂ ಜನಾಭಿಪ್ರಾಯ ಸಂಗ್ರಹವಾಗಲಿದೆ. ಸಾರ್ವಜನಿಕರು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ವಿವರಿಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರೂಪಾ ಅಂಗಡಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಂಜುಳಾ ಹುಲ್ಲಣ್ಣವರ, ಮಲ್ಲವ್ವ ಬಿಚ್ಚೂರ, ಪಡಿಯಪ್ಪ ಪೂಜಾರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರೇಮವ್ವ ನಾಯಕ, ಉಪಾಧ್ಯಕ್ಷೆ ಇಂದಿರಾ ತೇಲಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೊಹಮದ್‌ ತರಪದಾರ, ತಹಶೀಲ್ದಾರ್‌ ಶಿವಲಿಂಗಫ್ರಭು ವಾಲಿ, ಇಒ ಎಂ.ವಿ. ಚಳಗೇರಿ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಪ್ರಭು ಮೇಟಿ, ಸಿದ್ದು ಯಾಳಗಿ, ಶಶಿಧರ ಹೂಗಾರ, ತಾಲ್ಲೂಕು ಪಂಚಾಯ್ತಿ ವ್ಯವಸ್ಥಾಪಕ ಪಿ.ಎಚ್.ಗೋದಿಗನೂರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT