ಹೊಸನಗರ: ಒಮ್ಮೆ ಪರವಾನಗಿ ನೀಡಿದ ಮೇಲೆ ಮದ್ಯದ ಅಂಗಡಿ ಬಂದ್ ಮಾಡಿಸುವುದರ ವಿರುದ್ಧ ಪ್ರತಿಭಟನಾ ಹೋರಾಟದ ಜತೆಗೆ ಕಾನೂನಿನ ಹೋರಾಟ ನಡೆಸುವುದು ಅಗತ್ಯ ಆಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಪಟ್ಟಣದ ದ್ಯಾವರ್ಸದಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿ ಪರವಾನಿಗೆ ರದ್ದು ಮಾಡುವಂತೆ ಆಗ್ರಹಿಸಿ 8 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಸ್ಥಳಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.
ನ್ಯಾಯಯುತ ಹಾಗೂ ಅಹಿಂಸಾ ಪ್ರತಿಭಟನೆಗೆ ತಮ್ಮ ಬೆಂಬಲ, ಸಹಕಾರ ಇದೆ. ಇದರ ಜತೆಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟಕ್ಕೆ ಬೇಕಾದ ಮಾಹಿತಿ ಹಾಗೂ ಆರ್ಥಿಕ ವ್ಯವಸ್ಥೆಯನ್ನು ತಾವು ಮಾಡುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.