ಬೆಂಗಳೂರು: ‘ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಕುರಿತಂತೆ ಪೇಜಾವರ ಶ್ರೀಗಳ ಜೊತೆ 2018ರ ಜನವರಿ ಕೊನೆ ವಾರದಲ್ಲಿ ಚರ್ಚಿಸಲಾಗುವುದು’ ಎಂದು ಲಿಂಗಾಯತ ಧರ್ಮ ವೇದಿಕೆಯ ಕಾರ್ಯದರ್ಶಿ ಎಸ್.ಎಂ.ಜಾಮದಾರ ತಿಳಿಸಿದ್ದಾರೆ.
ಈ ಕುರಿತಂತೆ ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಶ್ರೀಗಳೇ ಸೂಚಿಸಿದ ಸೂಕ್ತ ಸ್ಥಳದಲ್ಲಿ ನಾವು ಅವರೊಂದಿಗೆ ಚರ್ಚಿಸಲು ಒಪ್ಪಿಕೊಂಡಿದ್ದೇವೆ. ನಮ್ಮ ತಂಡದವರು ಆ ಚರ್ಚೆಯಲ್ಲಿ ಭಾಗವಹಿಸಿ ಶ್ರೀಗಳು ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲಿದ್ದಾರೆ’ ಎಂದಿದ್ದಾರೆ.
ಲಿಂಗಾಯತ ಸ್ವತಂತ್ರಧ ಧರ್ಮದ ಮಾನ್ಯತೆ ವಿಷಯಕ್ಕೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳು ಇತ್ತೀಚೆಗಷ್ಟೇ ಹೇಳಿಕೆ ನೀಡಿ, ‘ವೀರಶೈವ, ಲಿಂಗಾಯತರು ಒಂದಾದರೆ ಮಾತ್ರ ಸಮಾಜಕ್ಕೆ ಬಲ ಬರುತ್ತದೆ’ ಎಂದಿದ್ದರು.
ಇದಕ್ಕೆ ಲಿಂಗಾಯತ ಬಣದ ಮುಖಂಡರು ಮತ್ತು ಸ್ವಾಮೀಜಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ‘ಶ್ರೀಗಳು ಲಿಂಗಾಯತರ ವಿಷಯದಲ್ಲಿ ಮೂಗು ತೂರಿಸಬಾರದು’ ಎಂದು ಹೇಳಿದ್ದರು.