ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020 ರ ವೇಳೆಗೆ ಹೃದ್ರೋಗಕ್ಕೆ 26 ಲಕ್ಷ ಬಲಿ !

ಜೀವನ ಶೈಲಿ ಬದಲಾವಣೆಯಿಂದ ನಗರವಾಸಿಗಳಲ್ಲಿ ಹೆಚ್ಚುತ್ತಿರುವ ಕಾಯಿಲೆ
Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೀವನ ಶೈಲಿ ಬದಲಾವಣೆಯಿಂದ ದೇಶದಲ್ಲಿ 2020 ರ ವೇಳೆಗೆ ಹೃದ್ರೋಗದಿಂದ ಸಾಯುವವರ ಸಂಖ್ಯೆ ಏರಿಕೆ ಆಗಲಿದ್ದು, ಸುಮಾರು 26 ಲಕ್ಷ ಜನ ಹೃದಯದ ಕವಾಟದ ಕಾಯಿಲೆಗೆ ಬಲಿಯಾಗಲಿದ್ದಾರೆ.

‘ಇಂಡಿಯನ್‌ ಕೌನ್ಸಿಲ್ ಆಫ್‌ ಮೆಡಿಕಲ್‌ ರೀಸರ್ಚ್‌’ ಸಂಸ್ಥೆ ಪೌಷ್ಟಿಕತೆ ಕುರಿತು ನಡೆಸಿರುವ ಅಧ್ಯಯನ ವರದಿಯಲ್ಲಿ ಈ ಅಂಶ ಉಲ್ಲೇಖಿಸಿದೆ. ಜಡ ಸ್ವಭಾವ, ಅನಾರೋಗ್ಯಕರ ಜೀವನಶೈಲಿ, ಬದಲಾದ ಆಹಾರ ಪದ್ಧತಿಯಿಂದ ಅಂಟು ಜಾಡ್ಯವಲ್ಲದ ಗಂಭೀರ ಸ್ವರೂಪದ ಕಾಯಿಲೆಗಳ ಪ್ರಮಾಣ ಎಲ್ಲ ವಯೋಮಾನದವರಲ್ಲಿ ಹೆಚ್ಚಲು ಪ್ರಮುಖ ಕಾರಣ ಎಂದು ಹೇಳಿದೆ.

ಅಧಿಕ ತೂಕ, ಬೊಜ್ಜು, ಮಧು ಮೇಹ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಮೇದಸ್ಸಿನ ಅಸಮತೋಲನ (Dyslipidemia), ಹೃದ್ರೋಗದ ಪ್ರಮಾಣ ನಗರ ಪ್ರದೇಶಗಳಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದೆ. ಅಚ್ಚರಿ ಸಂಗತಿ ಎಂದರೆ ನಗರ ಪ್ರದೇಶದಲ್ಲಿ ಪೌಷ್ಟಿಕತೆ ಕೊರತೆವುಳ್ಳವರು ಮತ್ತು ಮಿತಿಮೀರಿದ ಪೌಷ್ಟಿಕ ಆಹಾರ ಸೇವಿಸುವವರೂ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಹೃದ್ರೋಗಗಳ ಪೈಕಿ ಕವಾಟದ ತೊಂದರೆಗೆ ತುತ್ತಾಗುತ್ತಿರುವವರ ಸಂಖ್ಯೆ ಅಧಿಕವಾಗಿದೆ. 2020 ರ ವೇಳೆಗೆ ಕವಾಟದ ತೊಂದರೆಯಿಂದ ಹೃದ್ರೋಗಗಳ ಸಾವಿನ ಪ್ರಮಾಣ ಶೇ. 54.1 ಕ್ಕೆ ಏರಲಿದೆ. ಕಳೆದ ಒಂದು ಅಥವಾ ಎರಡು ದಶಕಗಳ ಹಿಂದೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕಂಡು ಬರುತ್ತಿದ್ದ ಅಕಾಲಿಕ ಹೃದಯ ಕವಾಟದ ತೊಂದರೆ ಲಕ್ಷಣ ಈಗ ಭಾರತೀಯರಲ್ಲಿ ಹೆಚ್ಚುತ್ತಿದೆ. ಇದು ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆ ಎಂದು ವರದಿ ಎಚ್ಚರಿಕೆ ನೀಡಿದೆ.

ನಗರ ಪ್ರದೇಶದಲ್ಲಿ ಪುರುಷರು (ಶೇ. 63) ಪ್ರತಿದಿನ ಎಂಟು ಗಂಟೆಗೂ ಹೆಚ್ಚು ಅವಧಿ ಮತ್ತು  ಮಹಿಳೆಯರು (ಶೇ. 72) ಎಂಟು ಗಂಟೆ ಕೆಲಸ ಮಾಡುತ್ತಾರೆ. ಇವರಲ್ಲಿ ಹೆಚ್ಚಿನವರು ಕಚೇರಿಗಳಲ್ಲಿ ಕುಳಿತುಕೊಂಡೇ ಕೆಲಸ ಮಾಡುತ್ತಾರೆ. ವ್ಯಾಯಾಮ ಮಾಡುವವರ ಸಂಖ್ಯೆ ತೀರಾ ಕಡಿಮೆ. ಪುರುಷರು ಶೇ.21 ಮಹಿಳೆಯರು ಶೇ.4, ಯೋಗಾಭ್ಯಾಸ ಮಾಡುವವರ ಪ್ರಮಾಣ ಪುರುಷರು ಶೇ.4 ಮತ್ತು ಮಹಿಳೆಯರು ಶೇ. 3. ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ದೈಹಿಕ ಶ್ರಮ ಕಡಿಮೆ ಆಗಿದೆ.

ಆಹಾರದಲ್ಲಿ ಕೊಬ್ಬು, ಉಪ್ಪು, ಸಕ್ಕರೆ ಅಂಶ ಮಿತಿ ಮೀರುತ್ತಿದೆ. ಕಾರ್ಬೊನೇಟೆಡ್‌ ಪಾನೀಯಗಳು, ಚಿಪ್ಸ್‌, ಬೇಕರಿ ತಿನಿಸುಗಳ ಸೇವೆ ಹೆಚ್ಚಾಗಿದೆ. ಇದರ ಜೊತೆಗೆ ಬೀಡಿ, ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಬಳಕೆ, ಮದ್ಯಪಾನ ಸೇವನೆಯಿಂದ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗಕ್ಕೆ ಕಾರಣವಾಗುತ್ತಿದೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರಗಳು ಹಮ್ಮಿಕೊಳ್ಳಬೇಕು. ಆರೋಗ್ಯಕರ ಜೀವನ ಶೈಲಿ ಅಳವಡಿಕೆ, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಆಹಾರ ಸೇವನೆ ಕ್ರಮ ಅಳವಡಿಸಿಕೊಳ್ಳಬೇಕು ಎಂದು ಇಂಡಿಯನ್‌ ಕೌನ್ಸಿಲ್ ಆಫ್‌ ಮೆಡಿಕಲ್‌ ರೀಸರ್ಚ್‌ ಸಂಸ್ಥೆ ತಿಳಿಸಿದೆ.

**

ಮಧುಮೇಹ: ರಾಜ್ಯಕ್ಕೆ 3 ನೇ ಸ್ಥಾನ

ರಾಜ್ಯದಲ್ಲಿ ಮಧುಮೇಹ ಮತ್ತು ಅಧಿಕ ಕೊಬ್ಬಿನಂಶ ಇರುವವರ ಸಂಖ್ಯೆ ಹೆಚ್ಚುತ್ತಿದೆ. ಮಧುಮೇಹದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ(ಶೇ.33), ಪುದುಚೇರಿ ನಂ 1 (ಶೇ 42) ಮತ್ತು ದೆಹಲಿ ನಂ 2 (ಶೇ 36). 60 ರಿಂದ 70 ವರ್ಷ ವಯಸ್ಸಿನವರಲ್ಲಿ ಮಧುಮೇಹ ಅಧಿಕ ಪ್ರಮಾಣದಲ್ಲಿದೆ.ಕೊಬ್ಬು ಕೇರಳ ನಂ1( ಶೇ. 38.6), ಕರ್ನಾಟಕ ನಂ 2 (ಶೇ 34.2 )ಸ್ಥಾನದಲ್ಲಿದೆ. ಇವರೆಡೂ ರಾಜ್ಯಗಳಲ್ಲೂ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನಂಶ ಇರುವುದು ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT