ಬೆಂಗಳೂರು: ಜೆ.ಪಿ.ನಗರ ಡಾಲರ್ಸ್ ಕಾಲೊನಿಯಲ್ಲಿರುವ ರಾಜಕಾಲುವೆ ಮತ್ತು ಚರಂಡಿಗಳನ್ನು ಅಭಿವೃದ್ಧಿಪಡಿಸಲು ₹10 ಕೋಟಿ ವೆಚ್ಚದ ಯೋಜನಾ ವರದಿ ಸಿದ್ಧಪಡಿಸುವಂತೆ ಎಂಜಿನಿಯರ್ಗಳಿಗೆ ಮೇಯರ್ ಆರ್.ಸಂಪತ್ ರಾಜ್ ಸೂಚಿಸಿದರು. ಈ ಪ್ರದೇಶದಲ್ಲಿ ಸೋಮವಾರ ಪರಿಶೀಲನೆ ನಡೆಸಿದರು.
ಈ ವೇಳೆ, ಬಡಾವಣೆಯಲ್ಲಿರುವ ಸಮಸ್ಯೆಗಳ ಬಗ್ಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ‘ಒಂದು ವಾರದಲ್ಲಿ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿದ್ದೇನೆ. ಇದಕ್ಕೆ ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಆರಂಭಿಸುತ್ತೇವೆ’ ಎಂದರು.
‘ರಾಜಕಾಲುವೆಗೆ ಚರಂಡಿ ನೀರು ಸೇರುತ್ತಿದೆ. ಪರ್ಯಾಯ ಮಾರ್ಗದಲ್ಲಿ ನೀರು ಹರಿಸುವಂತೆ ಜಲಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.
ದಾಲ್ಮಿಯಾ ಜಂಕ್ಷನ್ ಬಳಿಯ ಮೇಲುಸೇತುವೆ ಕಾಮಗಾರಿ ಪರಿಶೀಲಿಸಿದರು.