ನರಗುಂದ: ‘ಮಹದಾಯಿಗೆ ಯಾವ ಸರ್ಕಾರವೂ ಸ್ಪಂದಿಸುತ್ತಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ ಹೆಚ್ಚಾಗಿದೆ. ಪಕ್ಷಗಳು ಪ್ರತಿಷ್ಠೆಗೆ ಜೋತು ಬೀಳುತ್ತಿವೆ. ರಾಜಕೀಯ ದುರುದ್ದೇಶದಿಂದ ಮಹದಾಯಿ ನೀರು ಬರುತ್ತಿಲ್ಲ’ ಎಂದು ಹೋರಾಟ ಸಮಿತಿ ಸದಸ್ಯ ರಾಮಚಂದ್ರ ಸಾಬಳೆ ಆರೋಪಿಸಿದರು.
ಪಟ್ಟಣದಲ್ಲಿ ನಡೆದ ಮಹದಾಯಿ ಧರಣಿಯ 831ನೇ ದಿನವಾದ ಸೋಮವಾರ ಅವರು ಮಾತನಾಡಿದರು. ‘ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ರೈತರನ್ನು ಬಲಿ ಪಡೆಯುತ್ತಿವೆ. ಈ ಭಾಗದ ಜನಪ್ರತಿನಿಧಿಗಳಿಗೆ ಚುನಾವಣೆ ಸಂದರ್ಭದಲ್ಲಿ ತಕ್ಕ ಪಾಠ ಕಲಿಸಬೇಕು, ಇದಕ್ಕಾಗಿ ಮಹದಾಯಿ ಹೋರಾಟದ ಜತೆಗೆ ಕೈಜೋಡಿಸಿರುವ ಎಲ್ಲ ಸಂಘಟನೆಗಳು ಮುಂದಾಗಬೇಕು’ ಎಂದರು.
ಮಹದಾಯಿ ಹೋರಾಟ ಸಮಿತಿ ಉಪಾಧ್ಯಕ್ಷ ಪರಶುರಾಮ ಜಂಬಗಿ ಮಾತನಾಡಿದರು. ‘ರೈತರು ಎಚ್ಚೆತ್ತುಕೊಂಡಿದ್ದಾರೆ. ಅದರ ಪರಿಣಾಮ ಎದುರಿಸಲು ರಾಜಕಾರಣಿಗಳು ಸಿದ್ದರಾಗಬೇಕು. ಪ್ರತಿ ಹಂತದಲ್ಲೂ ರೈತರಿಗೆ ಅನ್ಯಾಯ ಆಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.