ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನ್ಸಾರಿಗೆ ಅಭಿವೃದ್ಧಿಯ ಕಾಳಜಿ ಇಲ್ಲ’

Last Updated 24 ಅಕ್ಟೋಬರ್ 2017, 8:33 IST
ಅಕ್ಷರ ಗಾತ್ರ

ಗಂಗಾವತಿ: ‘ಕೇಂದ್ರದಿಂದ ಸಾಕಷ್ಟು ಅನುದಾನ ಬಂದರೂ ಸಮರ್ಪಕ ಬಳಕೆ ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಎಡವಿದ್ದು, ಅಭಿವೃದ್ಧಿಯ ಬಗ್ಗೆ ಅವರಿಗೆ ನೈಜ ಕಾಳಜಿ ಇಲ್ಲ’ ಎಂದು ಸಂಸದ ಕರಡಿ ಸಂಗಣ್ಣ ಆರೋಪಿಸಿದರು.

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆಯೋಜಿಸಿದ್ದ ಕೇಂದ್ರ ಪುರಸ್ಕೃತ ಅಮೃತ್ ನಗರ ಯೋಜನೆಯಲ್ಲಿ ನೀರು ಸರಬರಾಜು, ಒಳಚರಂಡಿ, ಮಳೆ ನೀರು ಚರಂಡಿ, ಸಾರಿಗೆ ಹಾಗೂ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿ, ‘ಸ್ಥಳೀಯ ಶಾಸಕ ಇಕ್ಬಾಲ್ ಅನ್ಸಾರಿ ಅಭಿವೃದ್ಧಿ ನೆಪದಲ್ಲಿ ಸಮಾಜ ಸಮುದಾಯಗಳನ್ನು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಸಮಾಜಮುಖಿ ರಾಜಕಾರಣಿಗೆ ಇಂತಹ ಚಟುವಟಿಕೆಗಳು ಶೋಭೆ ತರುವಂತದ್ದಲ್ಲ’ ಎಂದು ಹೇಳಿದರು.

‘ಅಮೃತ್ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡುವ ಸಂಬಂಧ ಖುದ್ದು ಶಾಸಕ ಅನ್ಸಾರಿ ಅವರನ್ನು ಸಂಪರ್ಕಿಸಿ ದಿನಾಂಕ ನಿಗದಿ ಮಾಡುವಂತೆ ಕೋರಿದ್ದೆ. ಆದರೆ, ಸ್ಪಂದನೆ ಸಿಗಲಿಲ್ಲ. ಹೀಗಾಗಿ ಅಧಿಕಾರ ಚಲಾಯಿಸಬೇಕಾಯಿತು’ ಎಂದರು.

‘ಯೋಜನೆಯ ಕೆಲ ಕಾಮಗಾರಿಗಳನ್ನು ರದ್ದುಪಡಿಸಿ ಮರು ಟೆಂಡರ್ ಕರೆಯುವಂತೆ ಸೂಚಿಸಲಾಗಿದೆ. ಉಳಿದ ಯೋಜನೆಯ ಅನುದಾನದ ಬಗ್ಗೆ ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುತ್ತೇನೆ’ ಎಂದರು.

ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ವೀರನಗೌಡ ಮಾತನಾಡಿ, ‘₹110.78 ಕೋಟಿ ಮೊತ್ತದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದರು.

ನಗರಸಭಾ ಸದಸ್ಯರಾದ ವೀರಭದ್ರಪ್ಪ ನಾಯಕ್, ರಾಮಕೃಷ್ಣ, ಶೇಖ್‌ನಭಿ ಮಾತನಾಡಿದರು. ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಪ್ರಮುಖರಾದ ದಡೇಸ್ಗೂರು ಬಸವರಾಜ, ತಿಪ್ಪೇರುದ್ರಸ್ವಾಮಿ, ನಗರಸಭಾ ಸದಸ್ಯರಾದ ಮೌಸೀನ್, ಎಚ್.ಶರಣಪ್ಪ, ರಾಚಪ್ಪ ಸಿದ್ದಾಪುರ, ಪರಮೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT