ಮಂಗಳೂರು: ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮನ ಬಗ್ಗೆ ಹೊಸ ತಲೆಮಾರಿನ ಮಕ್ಕಳು ಅರಿತುಕೊಳ್ಳಬೇಕು. ಆಕೆಯ ಧೈರ್ಯ ಸಾಹಸ ಇಂದು ಪ್ರತಿಯೊಬ್ಬ ಮಹಿಳೆಗೂ ಆದರ್ಶ ಎಂದು ವಿಧಾನ ಪರಿಷತ್ನ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.
ದ.ಕ. ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಪ್ರಥಮ ಬಾರಿಗೆ ನಗರದ ರಾಮಕೃಷ್ಣ ವಿದ್ಯಾಸಂಸ್ಥೆಗಳ ಆವರಣದ ಗೀತಾ ಎಸ್. ಶೆಟ್ಟಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷರ ವಿರುದ್ಧ ರಣ ಕಹಳೆ ಊದಿದ್ದ ಚೆನ್ನಮ್ಮ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದ್ದರೂ ಆಕೆಯ ಕೆಚ್ಚೆದೆಯ ಹೋರಾಟ ಎಂದಿಗೂ ಪ್ರಸ್ತುತ. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರಿಟಿಷ್ ನಿಲುವಿನ ವಿರುದ್ಧ ಕಿತ್ತೂರು ರಾಣಿಯೂ ಹೋರಾಟ ನಡೆಸಿದ್ದರು ಎಂದು ಅವರು ಹೇಳಿದರು.
ಮಕ್ಕಳು ಕಿತ್ತೂರು ರಾಣಿ ಯಂತಾಗಬೇಕು ಎಂದರೆ ಅವರ ವೇಷಭೂಷಣವನ್ನು ಅನುಸರಿ ಸುವುದಲ್ಲ. ಕೇವಲ ಛದ್ಮವೇಷಕ್ಕೆ ಮಾತ್ರ ಕಿತ್ತೂರು ಚೆನ್ನಮ್ಮನ ಆದರ್ಶ ಸೀಮಿತಆಗಬಾರದು. ಬದಲಾಗಿ ನಾಡಿನ ಬಗ್ಗೆ ಅಭಿಮಾನ, ಬದುಕಿನಲ್ಲಿ ಸ್ವಾಭಿಮಾನ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಮೇಯರ್ ಕವಿತಾ ಸನಿಲ್ ಮಾತನಾಡಿ, ‘ಕಿತ್ತೂರು ರಾಣಿ ಚೆನ್ನಮ್ಮ ಮಹಿಳೆಯರಿಗೆ ಆದರ್ಶಪ್ರಾಯರಾಗಿದ್ದು, ಆಕೆಯ ಚರಿತ್ರೆಯನ್ನು ಎಲ್ಲರೂ ತಿಳಿಯಬೇಕಾಗಿದೆ. ಪೋಷಕರು ಕೂಡಾ ತಮ್ಮ ಮಕ್ಕಳನ್ನು ಕಿತ್ತೂರು ಚೆನ್ನಮ್ಮರಂತೆ ಧೈರ್ಯವಂತರಾಗಿ ಬೆಳೆಸಬೇಕು’ ಎಂದು ಕರೆ ನೀಡಿದರು.
ಶಾಲಾ ದಿನಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಪ್ರೇರಣೆಯನ್ನು ಸ್ಮರಿಸಿಕೊಂಡ ಅವರು, ಪ್ರತಿಯೊಬ್ಬ ಪೋಷಕರೂ ರಾಣಿ ಚೆನ್ನಮ್ಮನಿಂದ ಪ್ರೇರಣೆ ಪಡೆಯಬೇಕಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಮಂಗಳೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮುಹಮ್ಮದ್ ಮೋನು, ಕಸಪಾ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ಶೇಣಿ, ಪ್ರಾಥಮಿಕ ಶಾಲಾ ಮುಖ್ಯಸ್ಥೆ ಉಷಾ ಶೆಟ್ಟಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.