ಮಂಗಳೂರು: ಹಕ್ಕು ಪತ್ರ ಸಿಗದಿರುವ ಶಕ್ತಿನಗರ ಕಾರ್ಮಿಕ ಕಾಲನಿಯ ಜನರಿಗೆ ಹಕ್ಕುಪತ್ರ ಕೊಡಿಸಲು ಶೀಘ್ರದಲ್ಲೇ ಪ್ರಯತ್ನಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಶಕ್ತಿನಗರ ಕಾರ್ಮಿಕ ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾಲನಿಯಲ್ಲಿ ಹಲವು ವರ್ಷಗಳಿಂದ ಕಾರ್ಮಿಕರಾಗಿರುವ ಜನರಿಗೆ ಹಕ್ಕುಪತ್ರ, 94 ಸಿಸಿ, ಪಹಣಿಪತ್ರ ಮುಂತಾದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಇಲ್ಲಿ ಇಷ್ಟು ವರ್ಷಗಳಿಂದ ಜನ ವಾಸವಿದ್ದರೂ ಹಕ್ಕುಪತ್ರ ಕೊಡಲಾಗದಿರುವ ಬಗ್ಗೆ, ಅಲ್ಲಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿದ್ದ ಅಧಿಕಾರಿಗಳು ಮಾಹಿತಿ ನೀಡಿದರು. ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳು ನೀಡಿದ ಹೇಳಿಕೆಯನ್ನು ಆಲಿಸಿ ಸೂಕ್ತ ಸಲಹೆ ನೀಡಿದರು.
‘ಹಕ್ಕುಪತ್ರ ಸಿಕ್ಕಿ ಎನ್ ಒಸಿ ಸಿಗದೆ ಇರುವುದು, ಹಕ್ಕುಪತ್ರ ಇದ್ದು ಅದನ್ನು ಬೇರೆಯವರಿಗೆ ಮಾರಾಟ ಮಾಡಿರುವ ಬಗ್ಗೆ ಈ ಪ್ರದೇಶದಲ್ಲಿ ಇದೇ 30 ರಂದು ಅಧಿಕಾರಿಗಳು ವಿಶೇಷ ಸಭೆ ನಡೆಸಲಿದ್ದಾರೆ. ಈ ಸಭೆಯು ದಿನಪೂರ್ತಿ ನಡೆಯಲಿದ್ದು ಸುಮಾರು 25 ವರ್ಷಗಳಿಂದ ಪರಿಹಾರ ಸಿಗದಿರುವ ಸಮಸ್ಯೆಗಳಿಗೆ ತುರ್ತಾಗಿ ಪರಿಹಾರ ಕೊಡಲಿದ್ದಾರೆ ಎಂದರು.
ಸಭೆಯಲ್ಲಿ ಕಾರ್ಪೊರೇಟರ್ ಜುಬೇದ್ ಅಜೀಜ್, ಮಾಜಿ ಮೇಯರ್ ಅಬ್ದುಲ್ ಅಜೀಜ್, ಮರಿಯಮ್ಮ ಥೋಮಸ್, ತಹಶೀಲ್ದಾರ್ ಗುರುಪ್ರಸಾದ್, ಜಾಯ್, ಮಾಲೀನಿ ರೋಡ್ರಿಗಸ್, ಅಲ್ವೀನ್ ಪಾಯಸ್ ಇದ್ದರು.