ಚಿಕ್ಕಬಳ್ಳಾಪುರ: ಚಿಂತಾಮಣಿ ಹೊರವಲಯದ ಕನಂಪಲ್ಲಿ ಕೆರೆ ಬಳಿ ಶಾಸಕ ಎಂ.ಕೃಷ್ಣಾರೆಡ್ಡಿ ಅವರು ಮಂಗಳವಾರ ಏರ್ಪಡಿಸಿದ್ದ ‘ವನಮಹೋತ್ಸವ’ ಬಾಡೂಟಕ್ಕೆ ಬಂದಿದ್ದ ಯುವಕನೊಬ್ಬ ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾನೆ.
ಚಿಂತಾಮಣಿಯ ಬೊಂಬು ಬಜಾರ್ ನಿವಾಸಿ ಸುನೀಲ್ (22) ಮೃತಪಟ್ಟ ಯುವಕ. ಸುನೀಲ್ ಜತೆಯಲ್ಲೇ ಕೆರೆಗೆ ಇಳಿದಿದ್ದ ಇಬ್ಬರು ಯುವಕರು ಗಾಬರಿಯಿಂದ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸುನೀಲ್ನ ಮೃತದೇಹವನ್ನು ಹೊರಕ್ಕೆ ತೆಗೆದರು. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.