ನವದೆಹಲಿ : ಜಾಗತಿಕ ಪಿಡುಗಾಗಿರುವ ಭಯೋತ್ಪಾದನೆಯನ್ನು ಕೊನೆಗಾಣಿಸಲು ಸಂಘಟಿತ ಹೋರಾಟಕ್ಕೆ ಭಾರತ ಮತ್ತು ಅಫ್ಗಾನಿಸ್ತಾನ ಪಣ ತೊಟ್ಟಿವೆ.
ಗಡಿಯಾಚೆಗಿನ ಭಯೋತ್ಪಾದನೆಗೆ ಕಡಿವಾಣ ಮತ್ತು ಉಗ್ರರ ತಾಣಗಳನ್ನು ಸರ್ವನಾಶ ಮಾಡಲು ಅಫ್ಗಾನಿಸ್ತಾನದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಘನಿ ಮತ್ತು ಪ್ರಧಾನಿ ನರೇಂದ್ರ ಮೋದಿ ದೃಢ ನಿರ್ಧಾರ ಮಾಡಿದರು.
ಮಂಗಳವಾರ ನವದೆಹಲಿಗೆ ಬಂದಿಳಿದ ಅಶ್ರಫ್ ಘನಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್, ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಉಭಯ ರಾಷ್ಟ್ರಗಳ ಅಭಿವೃದ್ಧಿ ಯೋಜನೆಗಳು ಹಾಗೂ ಭಯೋತ್ಪಾದನೆ ನಿಗ್ರಹಕ್ಕೆ ಕೈಗೊಳ್ಳಬಹುದಾದ ನಿಲುವುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಅಫ್ಗಾನಿಸ್ತಾನದ ರಾಜಕೀಯ ಸ್ಥಿರತೆ, ಆಂತರಿಕ ಭದ್ರತೆ ಮತ್ತು ರಕ್ಷಣೆಗೆ ಅಗತ್ಯ ನೆರವು ನೀಡುವ ಭರವಸೆ ನೀಡಿದ ಭಾರತ, ಅಫ್ಗಾನಿಸ್ತಾನ ಬಯಸಿದರೆ ಅವರ ಸೇನೆ ಹಾಗೂ ಪೊಲೀಸರಿಗೆ ತರಬೇತಿ ನೀಡಲು ಸಿದ್ಧ ಎಂದು ಹೇಳಿದೆ.
ಘನಿ ಅಧ್ಯಕ್ಷರಾದ ಮೂರು ವರ್ಷಗಳಲ್ಲಿ ಭಾರತಕ್ಕೆ ನೀಡುತ್ತಿರುವ ನಾಲ್ಕನೇ ಅಧಿಕೃತ ಭೇಟಿ ಇದಾಗಿದೆ. ಪ್ರಧಾನಿ ಮೋದಿ ಅವರೊಂದಿಗೆ ನಡೆಸುತ್ತಿರುವ 12ನೇ ಮಾತುಕತೆ.