ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕೆಲಸ ದೇವರ ಕೆಲಸ ಶಿರೋನಾಮೆಗೆ ಸಾಕ್ಷಿಯಾಗಿದ್ದ ಇಮಾಂ

Last Updated 25 ಅಕ್ಟೋಬರ್ 2017, 6:20 IST
ಅಕ್ಷರ ಗಾತ್ರ

ಜಗಳೂರು: ರಾಜ್ಯದ ಹೆಮ್ಮೆಯ ಪಾರಂಪರಿಕ ಕಟ್ಟಡ ವಿಧಾನಸೌಧ ನಿರ್ಮಾಣವಾಗಿ 60 ವರ್ಷವಾಗುತ್ತಿದ್ದು ಅ.25ರಂದು ವಜ್ರ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿದ್ದ ಕೆಂಗಲ್‌ ಹನುಮಂತಯ್ಯ ಅವರು ತಮ್ಮ ಆಡಳಿತಕ್ಕಿಂತ ಹೆಚ್ಚಾಗಿ ವಿಧಾನಸೌಧ ನಿರ್ಮಾಣದ ರೂವಾರಿಯಾಗಿ ಜನಮಾನಸದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ.

ರಾಜಕೀಯ ಹಿನ್ನಡೆ, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ತಮ್ಮದೇ ಕಾಂಗ್ರೆಸ್‌ ಪಕ್ಷದೊಳಗಿನ ಒತ್ತಡ ಒಂದೆಡೆ. ₹ 2 ಕೋಟಿಯಷ್ಟು ಭಾರಿ ವೆಚ್ಚದ ಆಡಳಿತ ಸೌಧ ನಿರ್ಮಾಣಕ್ಕೆ ಆಗ ಸ್ವಪಕ್ಷದಲ್ಲೇ ವ್ಯಕ್ತವಾದ ತೀವ್ರ ವಿರೋಧ ಮತ್ತೊಂದೆಡೆ. ಇಷ್ಟೆಲ್ಲಾ ಅಡೆತಡೆಗಳನ್ನು ಹಿಮ್ಮೆಟ್ಟಿ ಹನುಮಂತಯ್ಯ ಅವರು ದಕ್ಷಿಣ ಭಾರತದಲ್ಲೇ ಅದ್ಭುತವಾದ ವಿಧಾನಸೌಧ ನಿರ್ಮಿಸಿದ ರೋಚಕ ಘಟನೆಗಳು ಕುತೂಹಲಕಾರಿಯಾಗಿವೆ.

₹ 50 ಲಕ್ಷ ಅಂದಾಜುವೆಚ್ಚದೊಂದಿಗೆ ಆರಂಭಗೊಂಡ ವಿಧಾನಸೌಧ ನಿರ್ಮಾಣ ಕಾಮಗಾರಿಯು ಅಂತಿಮ ಹಂತ ತಲುಪುವ ವೇಳೆಗೆ ₹ 2 ಕೋಟಿ ಖರ್ಚಾಗಿತ್ತು. ಇದನ್ನೇ ಅಸ್ತ್ರ ಮಾಡಿಕೊಂಡ ಕೆಲವು ಕಾಂಗ್ರೆಸ್‌ ವಿರೋಧಿಗಳು ಕೆಂಗಲ್‌ ವಿರುದ್ಧ ಆರೋಪಗಳ ಸುರಿಮಳೆಗೈದರು. ದುಂದುವೆಚ್ಚದ ಮೂಲಕ ರಾಜ್ಯದ ಆರ್ಥಿಕ ಸ್ಥಿತಿ ಹದಗೆಡಲು ಮುಖ್ಯಮಂತ್ರಿ ಕಾರಣರಾಗಿದ್ದಾರೆ ಎಂಬ ಆರೋಪ ಮುಗಿಲು ಮುಟ್ಟಿತ್ತು.

ಆ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಜಗಳೂರು ಇಮಾಂ ಸಾಬ್‌ ವಿಧಾನ ಮಂಡಲದ ತಮ್ಮ ಭಾಷಣದಲ್ಲಿ ಕೆಂಗಲ್‌ ಹನುಮಂತಯ್ಯ ಅವರ ವಿಧಾನಸೌಧ ನಿರ್ಮಾಣದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.

ಆರೋಪಗಳಿಂದ ಹೈರಾಣಾಗಿದ್ದ ಕೆಂಗಲ್‌ ಅವರಿಗೆ ಇಮಾಂ ಬೆಂಬಲದಿಂದ ಆನೆ ಬಲ ಸಿಕ್ಕಂತಾಗಿತ್ತು. ಕಟ್ಟಡ ನಿರ್ಮಾಣದ ಪ್ರತಿ ಹಂತದಲ್ಲೂ ಮುಖ್ಯಮಂತ್ರಿ ಅವರು ವಿರೋಧ ಪಕ್ಷದ ನಾಯಕ ಇಮಾಂ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಚರ್ಚಿಸುತ್ತಿದ್ದರು. ಭವ್ಯ ಸೌಧದ ನಿರ್ಮಾಣದ ಕುರಿತ ಘಟನಾವಳಿಗಳನ್ನು ಜೆ.ಇಮಾಂ ಅವರು ‘ಮೈಸೂರು ಆಗ ಮತ್ತು ಈಗ’ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ಸ್ವಾರಸ್ಯಕರವಾಗಿ ಹೀಗೆ ದಾಖಲಿಸಿದ್ದಾರೆ.

‘ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರು ಸುಸಜ್ಜಿತ ಆಡಳಿತ ಕಚೇರಿ ನಿರ್ಮಾಣಕ್ಕಾಗಿ ಕಬ್ಬನ್‌ ಪಾರ್ಕ್‌ನಲ್ಲಿ ₹ 15 ಲಕ್ಷ ಖರ್ಚಿನಲ್ಲಿ ಪ್ರಧಾನಿ ನೆಹರೂ ಅವರಿಂದ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ಕಟ್ಟಡದ ಕೆಲಸ ಆರಂಭವಾಗಲಿಲ್ಲ. ಹನುಮಂತಯ್ಯ ಅವರು ಮುಖ್ಯಮಂತ್ರಿ ಆದ ಕೂಡಲೇ ವಿಧಾನಸಭೆಯ ಕಾರ್ಯಕಲಾಪಗಳಿಗಾಗಿ ಪ್ರತ್ಯೇಕ ಸೌಧ ಕಟ್ಟಲು ತೀರ್ಮಾನಿಸಿದರು. ಅಠಾರ ಕಚೇರಿಯ ಮುಂಭಾಗದ ರೆಸಿಡೆನ್ಸಿ ಬಂಗಲೆಯ ಆವರಣದಲ್ಲಿ ₹ 50 ಲಕ್ಷ ಅಂದಾಜು ವೆಚ್ಚದ ವಿಧಾನಸೌಧ ನಿರ್ಮಾಣ ಕೆಲಸ ಶುರುವಾಯಿತು.

ಸೌಧದ ನಿರ್ಮಾಣಕ್ಕೆ ಭಾರಿ ಪ್ರಮಾಣದ ಟೀಕೆಗಳು ಬಂದವು. ಪ್ರತಿಪಕ್ಷ ನಾಯಕನಾದ ನಾನು ಕೆಂಗಲ್‌ ಅವರ ಆರ್ಥಿಕ ನೀತಿಗಳನ್ನು ಟೀಕಿಸುತ್ತಿದ್ದೆ. ಆದರೆ, ಸೌಧದ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ್ದೆ. ನಮ್ಮ ರಾಜ್ಯಕ್ಕೆ ಇಂತಹ ಭವ್ಯ ಕಟ್ಟಡದ ಅವಶ್ಯಕತೆ ಇದೆ ಎಂದು ನನಗೆ ಮನವರಿಕೆ ಆಗಿತ್ತು. ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಭಾರತದಲ್ಲೇ ಸುಂದರವಾದ ಭವನವು ಮೈಸೂರಿನ ಹೆಮ್ಮೆಯಾಗಿ ಪ್ರಕಾಶಿಸಿತು’ ಎಂದು ಬರೆದಿದ್ದಾರೆ.

‘ಒಂದು ದಿನ ಹನುಮಂತಯ್ಯ ಮತ್ತು ನಾನು ಕಟ್ಟಡ ಪರಿಶೀಲನೆಗೆ ತೆರಳಿದ್ದೆವು. ಮಹಾದ್ವಾರದ ಮೇಲ್ಭಾಗದಲ್ಲಿ ನೀತಿ ಬೋಧಕ ವಾಕ್ಯವೊಂದನ್ನು ಕೆತ್ತಿಸಬೇಕು ಎಂದು ಅವರು ಹೇಳಿದರು. ನಾವಿಬ್ಬರೂ ಯೋಚಿಸಿ, ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ವಾಕ್ಯ ಅರ್ಥಪೂರ್ಣವಾಗಿದೆ ಎಂದು ತೀರ್ಮಾನಿಸಿದೆವು. ಈ ವಾಕ್ಯ ಕೆತ್ತುವಂತೆ ಅಲ್ಲಿದ್ದ ಮುಖ್ಯ ಎಂಜಿನಿಯರ್‌ ಮುನಿಯಪ್ಪ ಅವರಿಗೆ ಸೂಚಿಸಿದರು’ ಎಂದು ಇಮಾಂ ಅವರು ಅಪರೂಪದ ಘಟನೆಯನ್ನು ವಿವರಿಸಿದ್ದಾರೆ.

ಜೆ.ಇಮಾಂ ಪರಿಚಯ: ಕೆಂಗಲ್‌ ಹನುಮಂತಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದವರು ಜಗಳೂರು ಇಮಾಂ. ಎಲ್ಲೆಡೆ ಕಾಂಗ್ರೆಸ್‌ ಸಮೂಹಸನ್ನಿ ಆವರಿಸಿಕೊಂಡಿದ್ದ ಕಾಲಘಟ್ಟ ಅದು. 1947ರಿಂದ 1957ರವರೆಗೆ ಕೆ.ಸಿ.ರೆಡ್ಡಿ ಮತ್ತು ಕೆಂಗಲ್‌ ಅವರ ಅವಧಿಯಲ್ಲಿ ಕಿಸಾನ್‌ ಮಜ್ದೂರ್‌ ಪಾರ್ಟಿಯ 10 ಸದಸ್ಯರ ಪುಟ್ಟ ಗುಂಪಿನೊಂದಿಗೆ ಸಮರ್ಥ ಪ್ರಥಮ ಪ್ರತಿಪಕ್ಷದ ನಾಯಕರಾಗಿದ್ದವರು ಇಮಾಂ.

1957ರಿಂದ 1967ರಲ್ಲಿ ಪ್ರಜಾ ಸೋಷಲಿಸ್ಟ್‌ ಪಾರ್ಟಿಯಿಂದ ಚಿತ್ರದುರ್ಗ ಲೋಕಸಭಾ ಸದಸ್ಯರಾಗಿದ್ದ ಅವರು, ನೆಹರೂ ಮತ್ತು ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ಅವಧಿಯಲ್ಲಿ ಹಲವು ಬಾರಿ ತಾತ್ಕಾಲಿಕವಾಗಿ ಲೋಕಸಭಾ ಅಧ್ಯಕ್ಷರಾಗಿದ್ದ ಕಾರ್ಯನಿರ್ವಹಿಸಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಮಹಾರಾಜರ ಮಂತ್ರಿಮಂಡಲದಲ್ಲಿ ಖಾಸಗಿ ಮಂತ್ರಿಯಾಗಿ ರೈಲ್ವೇ, ನೀರಾವರಿ, ಶಿಕ್ಷಣ, ಪೊಲೀಸ್‌, ಕೈಗಾರಿಕೆ ಸೇರಿ 24 ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಹೀಗೆ ಹತ್ತು ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದ ಅವರು 1983ರಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT