ಬಾಣಾವರ: ನಿಯಮಗಳ ಅನುಸಾರ ನಿವೇಶನ ಹಂಚಿಕೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಗ್ರಾಮ ಪಂಚಾಯಿತಿ ಸೂಚನಾ ಫಲಕದಲ್ಲಿ ಹೆಸರು ಪ್ರದರ್ಶಿಸಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು. ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಗ್ರಾಮಸಭೆಯಲ್ಲಿ ಅವರು, ‘ಬಾಣಾವರದ ಜಾವಗಲ್ ರಸ್ತೆ ಸಮೀಪ 28 ಎಕರೆ ಭೂಮಿ ಗುರುತಿಸಲಾಗಿದೆ. ಬೇಡಿಕೆ ಆಧರಿಸಿ 9 ಎಕರೆಯಲ್ಲಿ ನಿವೇಶನ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ’ ಎಂದರು.
ಆ ಭೂಮಿಯಲ್ಲಿ ಇರುವ ಕಲ್ಲುಬಂಡೆಗಳನ್ನು ತೆಗೆಸಲು ಹಣ ಬಿಡುಗಡೆ ಮಾಡಲಾಗಿದೆ. ಭೂ ಸೇನಾ ನಿಗಮ ಈ ಸ್ಥಳದಲ್ಲಿ ರಸ್ತೆ, ಚರಂಡಿ ವ್ಯವಸ್ಥೆ, ವಿದ್ಯುದೀಕರಣ, ಕುಡಿಯುವ ನೀರು ಸೌಲಭ್ಯ ಕಲ್ಪಿಸಲಿದ್ದು, ಇದಕ್ಕಾಗಿ ಪ್ರತ್ಯೇಕ ಅಂದಾಜು ರೂಪಿಸಿ, ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು. ಆದಷ್ಟು ಶೀಘ್ರ ಫಲಾನುಭವಿಗಳಿಗೆ ನಿವೇಶನ ಹಂಚಿಕೆಯಾಗಲಿದೆ. ಗ್ರಾಮ ಪಂಚಾಯಿತಿ ಅರ್ಜಿ ಆಹ್ವಾನಿಸಿದ್ದು, 300 ಅರ್ಜಿಗಳು ಬಂದಿವೆ. ಆಯ್ಕೆ ಮಾಡಿ ರಾಜೀವಗಾಂಧಿ ವಸತಿ ನಿಗಮಕ್ಕೆ ಕಳುಹಿಸಿಕೊಡಬೇಕು ಎಂದರು.
ಆದರ್ಶ ಗ್ರಾಮ ಪಂಚಾಯಿತಿ ಯೋಜನೆಗೆ ಬಾಣಾವರ ಆಯ್ಕೆಯಾಗಿದೆ. ₹ 1 ಕೋಟಿ ಬಿಡುಗಡೆ ಮಾಡಲಾಗಿದೆ. ಕಾಂಕ್ರೀಟ್ ರಸ್ತೆಗಳ ಅಭಿವೃದ್ಧಿಗೆ ಇದು ಸಹಾಯಕ ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಆರ್.ಜಯಣ್ಣ, ‘ಅಭಿವೃದ್ಧಿ ಪಡಿಸದೇ ಹೊನ್ನಮುಂಡಿ ಪ್ರದೇಶದಲ್ಲಿ ನಿವೇಶನ ಹಂಚಿಕೆ ಸರಿಯಲ್ಲ. ಫಲಾನುಭವಿಗಳ ಆಯ್ಕೆಗೆ ಮುನ್ನ ರಸ್ತೆ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಬೇಕು. ನಿವೇಶನ ಹದ್ದುಬಸ್ತು ನಿಗದಿಸಿ ಮತ್ತೆ ಗ್ರಾಮ ಸಭೆ ನಡೆಸಿ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂದರು.
ಶಾಸಕರು ಇದಕ್ಕೆ, ನಿಯಮದಂತೆ ಮೊದಲು ಫಲಾನುಭವಿಗಳ ಆಯ್ಕೆಯಾಗಬೇಕು. ಇವರಲ್ಲಿ ಶೇ 30 ರಷ್ಟು ಫಲಾನುಭವಿಗಳು ಮನೆ ನಿರ್ಮಿಸಿದರೆ ಮಾತ್ರ ರಸ್ತೆ, ನೀರು, ಚರಂಡಿ ಸೌಲಭ್ಯ ಕಲ್ಪಿಸಲು ಹಣ ಬಿಡುಗಡೆಯಾಗಲಿದೆ ಎಂದು ವಿವರಿಸಿದರು. ‘ಮೊದಲು ಫಲಾನುಭವಿಗಳ ಆಯ್ಕೆ ನಡೆಯಲಿ, ಸಹ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಸಕ್ತರು, ಅರ್ಹರು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬಹುದು’ ಎಂದು ಸಲಹೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಹೇಮಣ್ಣ ಅಧ್ಯಕ್ಷತೆ ವಹಿಸಿದ್ದರು, ಜಿ.ಪಂ ಸದಸ್ಯ ಬಿ.ಎಸ್.ಅಶೋಕ್, ತಾ.ಪಂ ಸದಸ್ಯೆ ಲಕ್ಷ್ಮಿ ಶ್ರೀಧರ್ ಅವರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.