ಕನಕಪುರ: ಬಂಧಿಸಲು ಹೋದ ಪೊಲೀಸರಿಗೆ ಚಾಕುವಿನಿಂದ ಇರಿದ ಕೊಲೆ ಆರೋಪಿ ಮೇಲೆ ಸೋಮವಾರ ರಾತ್ರಿ ಗುಂಡು ಹಾರಿಸಿ ಬಂಧಿಸಿದ ಘಟನೆ ಸಾತನೂರು ಹೋಬಳಿ ಬೋರೆಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಆರೋಪಿ ಚಂದ್ರು (21) ಈಗ ಪೊಲೀಸರ ಅತಿಥಿಯಾಗಿದ್ದಾನೆ. ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಂತ್ರಾಮ್ ಅವರ ಕೈಗೆ ಚೂರಿ ಇರಿತದಿಂದ ಗಾಯಗಳಾಗಿವೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಾತನೂರು ಹೋಬಳಿ ಹಲಸೂರು ಗ್ರಾಮದ ಪುಟ್ಟಸ್ವಾಮಿಗೌಡರ ಪತ್ನಿ ಕೆಂಪಮ್ಮ ಅವರನ್ನು ಒಂದು ತಿಂಗಳ ಹಿಂದೆ ಕೊಲೆ ಮಾಡಲಾಗಿತ್ತು. ಈ ಕೊಲೆ ಆರೋಪಿಯಾದ ಚಂದ್ರು ಬಂಧನಕ್ಕೆ ಪೊಲೀಸರ ಮೂರು ತಂಡಗಳು ತೆರಳಿದ್ದವು.
‘ಮನೆಯನ್ನು ಸುತ್ತುವರಿದು ಆರೋಪಿಯನ್ನು ವಶಕ್ಕೆ ಪಡೆದು ಹೊರಕ್ಕೆ ಕರೆತಂದಿದ್ದೆವು. ಆಗ ಆತ ಅನಂತರಾಮ್ ಅವರ ಮೇಲೆ ಹಲ್ಲೆ ನಡೆಸಿದ’ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಕು ಬಿಸಾಡುವಂತೆ ಸರ್ಕಲ್ ಇನ್ಸ್ಪೆಕ್ಟರ್ ಮಲ್ಲೇಶ್ ಹೇಳಿದರೂ ಆತ ಕೇಳಲಿಲ್ಲ. ಆಗ ಪೊಲೀಸ್ ಕಾನ್ಸ್ಟೆಬಲ್ ಮಲ್ಲೇಶ್ ಅವರು ಆರೋಪಿ ಕಾಲಿಗೆ ಪಿಸ್ತೂಲಿನಿಂದ ಗುಂಡು ಹೊಡೆದಿದ್ದಾಗಿ ಹೇಳಿದ್ದಾರೆ.