ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ನಿರೀಕ್ಷಕ (ಡಿಜಿ ಮತ್ತು ಐಜಿ) ಹುದ್ದೆಗೆ ಕನ್ನಡಿಗ ಎಚ್.ಸಿ. ಕಿಶೋರ್ ಚಂದ್ರ ಅವರನ್ನು ಪರಿಗಣಿಸುವಂತೆ ಕೆಲವು ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರುತ್ತಿದ್ದಾರೆ.
ಅ. 31ರಂದು ಹಾಲಿ ಡಿಜಿ ಮತ್ತು ಐಜಿ ಆರ್.ಕೆ. ದತ್ತಾ ನಿವೃತ್ತರಾಗಲಿದ್ದು, ರಾಜ್ಯೋತ್ಸವ ದಿನವಾದ ನ. 1ರಂದು ಈ ಹುದ್ದೆಗೆ ಹೊಸಬರನ್ನು ನೇಮಿಸಲು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ.
ಈ ಹುದ್ದೆಗೆ ಕಿಶೋರ್ ಚಂದ್ರ, ಐಪಿಎಸ್ ಅಧಿಕಾರಿ ನೀಲಮಣಿ ರಾಜು, ಎಂ.ಎನ್. ರೆಡ್ಡಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನೀಲಮಣಿ ರಾಜು ಅವರು ಉತ್ತರ ಪ್ರದೇಶದವರು. ರೆಡ್ಡಿ ಆಂಧ್ರಪ್ರದೇಶದವರು.
‘15 ವರ್ಷಗಳ ಬಳಿಕ ಕನ್ನಡಿಗರೊಬ್ಬರು ಪೊಲೀಸ್ ಮುಖ್ಯಸ್ಥ ಹುದ್ದೆಗೆ ಏರುವ ಅವಕಾಶ ಬಂದಿದೆ. ಮೈಸೂರಿನವರಾದ ಕಿಶೋರ್ ಚಂದ್ರ ಅವರಿಗೆ ಹುದ್ದೆ ನೀಡಿದರೆ, ಚುನಾವಣೆ ಸಂದರ್ಭದಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಲಾಭ ಆಗಲಿದೆ. ಅಲ್ಲದೆ, ಪ್ರಮುಖ ಹುದ್ದೆಗೆ ಒಕ್ಕಲಿಗ ಸಮುದಾಯವನ್ನು ನಿರ್ಲಕ್ಷಿಸುವುದು ಸರಿಯಲ್ಲ’ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಕಿಶೋರ್ ಚಂದ್ರ ಪರ ಸಚಿವರಾದ ಡಿ.ಕೆ. ಶಿವಕುಮಾರ್, ಎ. ಮಂಜು, ಎಂ.ಕೃಷ್ಣಪ್ಪ, ಕೃಷ್ಣ ಬೈರೇಗೌಡ, ಟಿ.ಬಿ. ಜಯಚಂದ್ರ, ಎಚ್.ಸಿ. ಮಹದೇವಪ್ಪ, ಶಾಸಕರಾದ ದಿನೇಶ್ ಗುಂಡೂರಾವ್, ಎಸ್.ಟಿ. ಸೋಮಶೇಖರ್ ಲಾಬಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.