ಬಾಗಲಕೋಟೆ: ‘ಗ್ಯಾಂಗ್ರೀನ್ ನಿಂದಾಗಿ ಕಾಲು ಕತ್ತರಿಸಲಾಗಿದ್ದು, ದುಡಿಮೆ ಇಲ್ಲದೆ ಬದುಕೇ ದುಸ್ತರವಾಗಿದೆ. ಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಆಗಲೀ ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಯಾವ ಪದಾಧಿಕಾರಿಗಳೂ ನನ್ನ ನೆರವಿಗೆ ಬಂದಿಲ್ಲ’ ಎಂದು ಖಳನಟ ಸತ್ಯಜಿತ್ ಅಳಲು ತೋಡಿಕೊಂಡರು.
‘ಸಂಕಷ್ಟದ ವೇಳೆ ಚಿತ್ರಕಲಾವಿದರ ಸಂಘದಿಂದ ನೆರವು ಪಡೆಯುವುದು ಕಲಾವಿದನಾದ ನನ್ನ ಹಕ್ಕು. ಆದರೆ ನಮ್ಮಂತಹ ಬಡ ಕಲಾವಿದರ ಕೂಗನ್ನು ಯಾರೂ ಕೇಳುತ್ತಿಲ್ಲ’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
‘ಹುಬ್ಬಳ್ಳಿಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ಬೆಳ್ಳಿತೆರೆ ಆಕರ್ಷಣೆಯಿಂದ 1986ರಲ್ಲಿ ರಾಜೀನಾಮೆ ಕೊಟ್ಟು ಬೆಂಗಳೂರಿಗೆ ತೆರಳಿದೆ. ಇಲ್ಲಿಯವರೆಗೂ 654 ಚಿತ್ರಗಳಲ್ಲಿ ನಟಿಸಿದ್ದೇನೆ. ವಿಶ್ರಾಂತಿ ಇಲ್ಲದೇ ದುಡಿದ ಫಲವಾಗಿ ಮಧುಮೇಹ ಬಂದಿದೆ. ಗ್ಯಾಂಗ್ರೀನ್ ನಿಂದ ಬಳಲಿದ್ದು, ಶಸ್ತ್ರಚಿಕಿತ್ಸೆಗೆ ₹ 7.5 ಲಕ್ಷ ಖರ್ಚಾಗಿದೆ ಎಂದು ಅವರು ಹೇಳಿದರು.
‘ನಟರಾದ ಉಪೇಂದ್ರ, ಶಿವರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ತಲಾ ₹1 ಲಕ್ಷ ನೆರವು ನೀಡಿದ್ದಾರೆ’ ಎಂದರು.
‘ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆಸ್ಪತ್ರೆಯ ವೆಚ್ಚ ₹4.5 ಲಕ್ಷ ಭರಿಸಲಾಗಿದೆ. ಇಂತಹ ಹೊತ್ತಿನಲ್ಲಿ ಕಲಾವಿದರ ಸಂಘದಿಂದ ಧನ ಸಹಾಯದ ಅಗತ್ಯವಿದೆ. ಆದರೆ ಆ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಉತ್ತರ ಕರ್ನಾಟಕದ ಕಲಾವಿದರ ಬಗ್ಗೆ ಚಿತ್ರರಂಗ ಹೊಂದಿರುವ ಮಲತಾಯಿ ಧೋರಣೆಯ ಪ್ರತೀಕವಿದು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.