ಹೊಸಪೇಟೆ: 'ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ವಾಲ್ಮೀಕಿ ನಾಯಕ ಸಮುದಾಯಕ್ಕೆ ರಾಜ್ಯ ಸರ್ಕಾರ ಶೇ 7.5 ರಷ್ಟು ಮೀಸಲಾತಿ ಕಲ್ಪಿಸಿದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ' ಎಂದು ಸಂಸದ ಬಿ.ಶ್ರೀರಾಮುಲು ಹೇಳಿದರು.
ತಾಲ್ಲೂಕಿನ ಕಮಲಾಪುರದಲ್ಲಿ ಬುಧವಾರ ನಡೆದ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
'ರಾಜ್ಯದಲ್ಲಿಯೇ ನಾಯಕ ಸಮಾಜ ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯಲು ಸಂಘಟಿತರಾಗಿ ಹೋರಾಟ ನಡೆಸುವ ಅನಿವಾರ್ಯತೆ ಇದೆ' ಎಂದರು.
‘ಶೇ 7.5 ಮೀಸಲಾತಿ ನೀಡುವಂತೆ ನ್ಯಾಯಾಲಯ ಸೂಚಿಸಿದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯೆ ವಹಿಸಿದೆ’ ಎಂದರು.
ಶಾಸಕ ಆನಂದಸಿಂಗ್, ಬಿಜೆಪಿ ಮುಖಂಡ ರಾಜುಗೌಡ, ಎನ್.ಓಬಯ್ಯ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಜಿ.ಹನುಮಂತ, ಬಿ.ಕಿರಣಕುಮಾರ್, ಗೋಪಣ್ಣ, ಲಕ್ಷ್ಮಿದೇವಿ ಜಿಗಳಿ ಸಮಾಜದ ಮುಖಂಡರಾದ ರಾಜಶೇಖರ, ಕನಕಗಿರಿ ಉಪನ್ಯಾಸಕ ಎಂ.ಕೆ.ದುರುಗಪ್ಪ, ಜಂಬಯ್ಯನಾಯಕ, ಎಂ.ಜಿ.ಜೋಗಯ್ಯ ಇದ್ದರು.