ಚಿತ್ರದುರ್ಗ: ದೇಶವನ್ನು ಒಂದು ಹೊಸ ಯುಗಕ್ಕೆ ಕೊಂಡೊಯ್ಯುವುದಾಗಿ ಹೇಳಿ ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಫಲರಾಗಿದ್ದಾರೆ ಎಂದು ಭಾರತೀಯ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಕರ್ತರು ದೂರಿದರು.
ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ನವರು ಪ್ರಧಾನಿ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡು ದೇಶದ ಜನತೆ ಕಂಗಾಲಾಗುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಹೇಳಿದಂತೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ. ವಿದೇಶಗಳಲ್ಲಿನ ಕಪ್ಪು ಹಣ ವಾಪಸ್ಸು ತಂದಿಲ್ಲ. ಗರಿಷ್ಠ ಮುಖಬೆಲೆಯ ನೋಟು ರದ್ದತಿ ಹಾಗೂ ಜಿಎಸ್ಟಿ ಜಾರಿಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಪೆಟ್ಟುಬಿದ್ದಿದೆ. ಆದ್ದರಿಂದ ಭರವಸೆ ನೀಡುವುದಕ್ಕೂ ಮುನ್ನ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಇನ್ನಾದರೂ ಜನತೆಯನ್ನು ಯಾಮಾರಿಸುವುದನ್ನು ನಿಲ್ಲಿಸಿ ಎಂದು ಮೋದಿ ಅವರಿಗೆ ಒತ್ತಾಯಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಡಿ.ಹಸನ್ ತಾಹೀರ್, ಯುವ ಕಾಂಗ್ರೆಸ್ನ ಮುಖಂಡರಾದ ಜಿ.ಕೆ.ಮಹಮದ್ ರಫಿ, ಮಹಮದ್ ಹಫೀಜುಲ್ಲಾ, ಹರ್ಷೆ ಆಜಾಮ್, ಶೌಕತ್ ಬಾಷಾ, ಯೂಸೂಫ್, ಮಹಮದ್ ಆಜಾಮ್, ಅಶ್ಯು, ಶಿವಕುಮಾರ್, ಪ್ರವೀಣ್ ಹಾಗೂ ಪದಾಧಿಕಾರಿಗಳು ಇದ್ದರು.