ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಬೂತ್‌ ಮಟ್ಟದ ಸಮಿತಿ ರಚನೆಗೆ ಸೂಚನೆ

ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಸಂಚಾಲಕರಾಗಿ ಬಸವರಾಜ ಭಜಂತ್ರಿ ನೇಮಕ
Last Updated 26 ಅಕ್ಟೋಬರ್ 2017, 8:27 IST
ಅಕ್ಷರ ಗಾತ್ರ

ಧಾರವಾಡ: ಈಗಾಗಲೇ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸಲಾಗಿದ್ದು, ಬೂತ್‌ ಸಮಿತಿಗಳನ್ನು ಶೀಘ್ರದಲ್ಲೇ ರಚಿಸಬೇಕು’ ಎಂದು ಜೆಡಿಎಸ್‌ ಜಿಲ್ಲಾ ಉಸ್ತುವಾರಿ ಮರಿಲಿಂಗೇಗೌಡ ಪಕ್ಷದ ಮುಖಂಡರಿಗೆ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ವಾರ್ಡ್‌ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಪಕ್ಷ ಸಂಘಟನೆ ಅವಶ್ಯಕ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಪ್ರಾಮಾಣಿಕವಾಗಿ ಶ್ರಮಿಸಬೇಕು’ ಎಂದರು.

‘ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರನ್ನು ಗುರುತಿಸಿ ಟಿಕೆಟ್ ನೀಡಲು ಉದ್ದೇಶಿಸಲಾಗಿದೆ. ಹೊರಗಿನವರಿಗೆ ಅವಕಾಶವಿಲ್ಲ. ಅಭ್ಯರ್ಥಿಗಳು ಯಾರೇ ಆದರೂ ಕಾರ್ಯಕರ್ತರು ಅವರ ಗೆಲುವಿಗೆ ಶ್ರಮಿಸಬೇಕು. ಜೆಡಿಎಸ್‌ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಕರಿಸಬೇಕು’ ಎಂದರು.

‘ಗ್ರಾಮೀಣ ಭಾಗದಲ್ಲಿ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾರ್ಯಕರ್ತರು ಹಳ್ಳಿಹಳ್ಳಿಗೂ ತೆರಳಿ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಪಕ್ಷ ಕಟ್ಟುವ ಜವಾಬ್ದಾರಿ ವಹಿಸಬೇಕು. ಬರುವ ಚುನಾವಣೆಯಲ್ಲಿ ಬಹುಮತದೊಂದಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ರೈತರು ಮತ್ತು ಬಡವರ ಪರ ಕೆಲಸ ಮಾಡಲಿದ್ದಾರೆ’ ಎಂದು ಮರಿಲಿಂಗೇ ಗೌಡ ಹೇಳಿದರು.

ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸೀಮರದ ಮಾತನಾಡಿ, ‘ಪಕ್ಷದ ಬಗ್ಗೆ ಇಂದಿಗೂ ನಾಗರಿಕರಲ್ಲಿ ವಿಶ್ವಾಸವಿದೆ. ಆದರೆ ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದಿದ್ದರಿಂದಾಗಿ ಈವರೆಗೂ ಕೆಲವು ತೊಂದರೆಗಳಾದವು. ಆದರೆ ಮುಂದೆ ಹೀಗಾಗಬಾರದು. ಅದಕ್ಕೆ ಎಲ್ಲ ಕಾರ್ಯಕರ್ತರು ಸೇರಿಕೊಂಡು ಪಕ್ಷ ಬಲವರ್ಧನೆಗೆ ಶ್ರಮಿಸಬೇಕು’ ಎಂದರು.

‘ಬಸವರಾಜ ಭಜಂತ್ರಿ ಅವರನ್ನು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದ್ದು, ಅವರೊಂದಿಗೆ 20 ಜನರ ತಂಡವನ್ನು ರಚಿಸಲಾಗಿದೆ. ಇವರೆಲ್ಲರೂ ನಿತ್ಯ ಕ್ಷೇತ್ರದ ಒಂದೊಂದು ವಾರ್ಡ್‌ಗಳಿಗೆ ಭೇಟಿ ನೀಡಿ ಪಕ್ಷ ಹಾಗೂ ಹಿಂದೆ ಜೆಡಿಎಸ್‌ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಾಡಿದ ಕೆಲಸ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಸೂಚಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ, ರಾಜು ಅಂಬೋರೆ, ಶ್ರೀಕಾಂತ ಜಮನಾಳ, ಅಲ್ತಾಫ್ ಕಿತ್ತೂರ, ಮುಜಾಹಿದ ಕಾಂಟ್ರ್ಯಾಕ್ಟರ್, ಎಂ.ಎಫ್. ಹಿರೇಮಠ, ಬಸವರಾಜ ಭಜಂತ್ರಿ, ಶಾಂತವೀರ ಬೆಟಗೇರಿ, ದೇವರಾಜ ಕಂಬಳಿ, ಸುರೇಶ ಹಿರೇಮಠ, ಜಲಾನಿ ಖಾಜಿ, ಮುದಕಪ್ಪ ಮಲ್ಹಾರಿ, ನವೀನ ಮುನಿಯಪ್ಪನವರ, ವೆಂಕಟೇಶ ಸಗಬಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT