ಗದಗ: ಸಿಬ್ಬಂದಿ ಕೊರತೆಯಿಂದ ವಿಚಾರಣಾಧೀನ ಕೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ವಿಳಂಬ ಆಗುತ್ತಿದ್ದು, ಅವರು ಜೈಲಿನಲ್ಲೇ ಹೆಚ್ಚು ಕಾಲ ಕಳೆಯುವಂತಾಗಿದೆ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಕಳವಳ ವ್ಯಕ್ತಪಡಿಸಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲವು ನ್ಯಾಯಾಲಯಗಳಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಗುತ್ತಿದೆ. ಇದರಲ್ಲೂ ತಾಂತ್ರಿಕ ಲೋಪಗಳಿದ್ದು ಅದನ್ನು ಸರಿಪಡಿಸಬೇಕಿದೆ’ ಎಂದರು.
‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಾರಾಗೃಹಗಳ ಸ್ಥಿತಿ ಉತ್ತಮವಾಗಿದೆ. ಕೈದಿಗಳನ್ನು ಅವರ ಸ್ವಂತ ಊರಿಗೆ ಸಮೀಪ ಇರುವ ಕಾರಾಗೃಹಗಳಿಗೆ ವರ್ಗಾಯಿಸಿದರೆ, ಅವರ ಕುಟುಂಬ ಸದಸ್ಯರಿಗೆ ಅವರನ್ನು ಭೇಟಿ ಮಾಡಲು ಅನುಕೂಲವಾಗುತ್ತದೆ. ಇದಕ್ಕೆ ಸಂಬಂಧಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದರು.
ಗದಗ ಜಿಲ್ಲೆಯಲ್ಲಿ ಕಳೆದ ಒಂದು ದಶಕದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿ ಒಟ್ಟು 617 ದೂರುಗಳು ದಾಖಲಾಗಿವೆ. ಇದರಲ್ಲಿ 565 ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು, 52 ಬಾಕಿ ಉಳಿದಿವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.