ಹಾಸನ: ದೇಶದ ಕಾನೂನು ಮತ್ತು ರಾಜ್ಯದ ಸ್ಥಿತಿಗತಿ ಬಗ್ಗೆ ಅರಿವಿಲ್ಲದೆ ಯುವ ಸಮುದಾಯ ತೊಂದರೆ ಅನುಭವಿಸುತ್ತಿದೆ ಎಂದು ಹೈಕೋರ್ಟ್ ವಕೀಲ ಅಕ್ಮಲ್ ಹಸನ್ ರಜ್ವಿ ಆತಂಕ ವ್ಯಕ್ತಪಡಿಸಿದರು.
ನಗರದ ಪೆನ್ಷನ್ ಮೊಹಲ್ಲಾದ ಡಿಎಸ್ಎಂ ಹಾಲ್ ನಲ್ಲಿ ಮೂವ್ಮೆಂಟ್ ಫಾರ್ ಜಸ್ಟೀಸ್ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ‘ಸಾರ್ವಜನಿಕರ ಉಪಯೋಗಕ್ಕಾಗಿ ಕಾನೂನು ಅರಿವು ಮತ್ತು ಮೈಕ್ರೋ ಫೈನಾನ್ಸ್ (ಬಡ್ಡಿ ರಹಿತ) ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.
ಯುವಕರು ಸಾಮಾಜಿಕ ಜಾಲತಾಣಗಳಾದ ವಾಟ್ಸ್ಅಪ್, ಫೇಸ್ಬುಕ್ಗಳ ದಾಸರಾಗಿ ತಮಗೆ ಅರಿವಿಲ್ಲದೆ ಕಾನೂನಿನ ಅಡಿ ತೊಂದರೆಗೆ ಸಿಲುಕುತ್ತಿದ್ದಾರೆ. ಜತೆಗೆ ಕಲಿಕೆಯಲ್ಲೂ ಹಿಂದೆ ಬೀಳುತ್ತಿದ್ದಾರೆ. ಇದರಿಂದ ಹೇಗೆ ಹೊರಬರಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಯುವ ಸಮುದಾಯ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಗಾಂಜಾ ಮಾದಕ ವಸ್ತುಗಳ ಸೇವನೆ, ಮದ್ಯಪಾನ ಮತ್ತು ಧೂಮಪಾನದಿಂದ ದೂರವಿದ್ದು, ಸಮಾಜದ ಮುಖ್ಯವಾಹಿನಿಗೆ ಬಂದು ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ‘ಲೈಫ್ ಲೈನ್ ಫೌಂಡೇಷನ್’ ಸಂಸ್ಥೆಯ ಆಸಿಫ್ ಅಯಾಜ್, ಬಡ್ಡಿ ರಹಿತ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ವಿವರ ನೀಡಿದರು.
ನಗರಸಭೆ ಸದಸ್ಯ ಅಮೀರ್ ಜಾನ್ ಮಾತನಾಡಿ, ಯುವ ಜನರು ಇತ್ತೀಚೆಗೆ ಕೆಟ್ಟ ವಿಚಾರಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದನ್ನು ಬಿಟ್ಟು ಮಾನವೀಯ ಗುಣ ಬೆಳೆಸಿಕೊಳ್ಳಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೂವ್ಮೆಂಟ್ ಫಾರ್ ಜಸ್ಟೀಸ್ ನ ರಾಜ್ಯ ನಿರ್ದೇಶಕ ಇರ್ಷಾದ್ ಸಾಬ್ ಮಾನವೀಯ ಮೌಲ್ಯಗಳ ಮಹತ್ವದ ಬಗ್ಗೆ ವಿವರಿಸಿದರು.
ಮೂವ್ಮೆಂಟ್ ಫಾರ್ ಜಸ್ಟೀಸ್ ಹಾಸನ ಘಟಕದ ಸಹ ಕಾರ್ಯದರ್ಶಿ ಮೆಹಬೂಬ್ ಅಲಿ ಖಾನ್, ಮೂವ್ ಮೆಂಟ್ ಫಾರ್ ಜಸ್ಟೀಸ್ ಜಿಲ್ಲಾ ಘಟಕದ ಸಂಚಾಲಕ ಫಾರೂಕ್, ಕೌಸರ್ ಅಹಮದ್ ಇದ್ದರು.