ಚಿಂಚೋಳಿ: ರಾಜ್ಯ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ವರದಿ ಜಾರಿಯಾಗುವವರೆಗೆ ಶೇ 30 ಮಧ್ಯಂತರ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕನಾರ್ಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿದೆ.
ಇಲ್ಲಿನ ಚಂದಾಪುರದ ಸರ್ಕಾರಿ ನೌಕರರ ಭವನದಿಂದ ಮಿನಿ ವಿಧಾನಸೌಧದವರೆಗೆ ಬುಧವಾರ ಮೆರವಣಿಗೆ ನಡೆಸಿದರು.
‘ಆಯೋಗದಿಂದ ಬೇಗ ವರದಿ ಪಡೆದು ಜಾರಿ ಮಾಡಬೇಕು. ಅಲ್ಲಿವರೆಗೆ ಶೇ 30ರಷ್ಟು ಮಧ್ಯಂತರ ಪರಿಹಾರ ನೀಡಬೇಕು. ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ 7ನೇ ವೇತನ ಆಯೋಗ ರಚನೆಯಾಗಿದೆ. ಸರ್ಕಾರದ ಯೋಜನೆಗಳ ಅನುಷ್ಠಾನದ ಜವಾಬ್ದಾರಿ ಹೊತ್ತ ಸರ್ಕಾರಿ ನೌಕರರ ಹಿತ ಕಾಯುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಪ್ರತಿ 5 ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸಿ, ವರದಿ ಪಡೆದು ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಸಂಘದ ಅಧ್ಯಕ್ಷ ಶ್ರೀನಿವಾಸ ಪಾಟೀಲ, ಮಲ್ಲಿಕಾರ್ಜುನ ಪಾಲಾಮೂರು, ಸುರೇಶ ಕೊರವಿ, ಜಗನ್ನಾಥರೆಡ್ಡಿ ರಂಜೋಳ್, ಜಯಪ್ಪ ಚಾಪಲ್, ರವಿಕಾಂತ ಕಾರಪೆಂಟರ್, ಶಾಂತವೀರ ಹೀರಾಪುರ, ಸುರೇಂದ್ರ ಹೊನ್ನಪ್ಪಗೋಳ್ ಮಾತನಾಡಿ, ನೌಕರರ ಸಮಸ್ಯೆಗಳನ್ನು ವಿವರಿಸಿದರು.