ಗೋಣಿಕೊಪ್ಪಲು: ಕಾಫಿಯಲ್ಲಿ ಉತ್ತಮ ಇಳುವರಿ ಪಡೆಯಲು ಮಣ್ಣು ಪರೀಕ್ಷೆ ಮಾಡಿಸುವುದು ಉತ್ತಮ. ಇದರಿಂದ ಗೊಬ್ಬರ ನಿರ್ವಹಣೆ ಬಗ್ಗೆ ಕ್ರಮಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಕಾಫಿ ಮಂಡಳಿ ಸಂಶೋಧನಾ ಕೇಂದ್ರದ ಮಣ್ಣು ಪರೀಕ್ಷಾ ತಜ್ಞ ಶಿವಪ್ರಸಾದ್ ಹೇಳಿದರು.
ಇಲ್ಲಿನ ಕಾಫಿ ಮಂಡಳಿ ಮತ್ತು ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಬುಧವಾರ ತಿತಿಮತಿಯಲ್ಲಿ ನಡೆದ ಮಣ್ಣು ಪರೀಕ್ಷೆ ಮತ್ತು ಗೊಬ್ಬರಗಳ ನಿರ್ವಹಣೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಬೆಳೆಗಾರರು ಪ್ರತಿ ವರ್ಷ ಮಣ್ಣು ಪರೀಕ್ಷೆ ಮಾಡುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದರು.
ಕಾಫಿ ಮಂಡಳಿ ಉಪನಿರ್ದೇಶಕ ಸತೀಶ್ ಚಂದ್ರ ಮಾತನಾಡಿ, ಕಾರ್ಯಾಗಾರಗಳನ್ನು ಹೆಚ್ಚು ನಡೆಸುವುದರಿಂದ ಬೆಳೆಗಾರರಲ್ಲಿ ಹೆಚ್ಚಿನ ಜ್ಞಾನ ಉಂಟುಮಾಡಬಹುದು. ಶಿಬಿರಗಳಿಗೆ ಹೆಚ್ಚು ಬೆಳೆಗಾರರು ಪಾಲ್ಗೊಳ್ಳುವಂತಾಗಬೇಕು ಎಂದರು.
ಕೀಟ ತಜ್ಞ ರಂಜಿತ್, ಎಸ್.ಬಿ.ರಮೇಶ್, ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ ಹಾಜರಿದ್ದರು.