ಮೈಸೂರು: ಪಕ್ಷ ತೊರೆಯಲು ಮುಂದಾಗಿರುವ ಹಿರಿಯ ಮುಖಂಡ ಸಿ.ಎಚ್.ವಿಜಯಶಂಕರ್ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಾಲ್ಗೊಂಡಿದ್ದ ರೈತರ ಸಮಾವೇಶಕ್ಕೆ ಗೈರು ಹಾಜರಾದರು.
ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಸಮಾವೇಶದ ವೇದಿಕೆಯ ಬ್ಯಾನರ್ನಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರೂ ಆಗಿರುವ ವಿಜಯಶಂಕರ್ ಭಾವಚಿತ್ರ ಇತ್ತು. ಕಾರ್ಯಕ್ರಮದಲ್ಲಿ ಮಾತ್ರ ಅವರು ಕಾಣಿಸಿಕೊಳ್ಳಲಿಲ್ಲ.
ಈ ಮೂಲಕ ಪಕ್ಷ ತೊರೆಯುವ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ವರಿಷ್ಠರಿಗೆ ರವಾನಿಸಿದ್ದಾರೆ. ಸಮಾವೇಶದಲ್ಲಿ ವಿಜಯಶಂಕರ್ ಹೆಸರನ್ನು ಯಾರೂ ಪ್ರಸ್ತಾಪ ಮಾಡಲಿಲ್ಲ.
‘ಮನವೊಲಿಸುವ ಉದ್ದೇಶದೊಂದಿಗೆ ಮೈಸೂರಿಗೆ ಬಂದಿದ್ದ ಯಡಿಯೂರಪ್ಪ ಅವರು ಸಮಾವೇಶದಲ್ಲಿ ವಿಜಯಶಂಕರ್ ಪಾಲ್ಗೊಳ್ಳುವ ವಿಶ್ವಾಸದಲ್ಲಿದ್ದರು. ಆದರೆ, ತಾವು ಭಾಗವಹಿಸಿದ್ದ ಕಾರ್ಯಕ್ರಮಕ್ಕೇ ಗೈರಾಗಿದ್ದರಿಂದ ಮನವೊಲಿಸುವ ನಿರ್ಧಾರ ಕೈಬಿಟ್ಟರು’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕೆಲ ದಿನಗಳ ಹಿಂದೆ ಯಡಿಯೂರಪ್ಪ ಅವರು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ವಿಜಯಶಂಕರ್ ಕರೆ ಸ್ವೀಕರಿಸಿರಲಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಅವರ ಪ್ರಯತ್ನವೂ ವಿಫಲವಾಗಿತ್ತು.