ಬೆಂಗಳೂರು: ಎಲ್ಲ ಇಲಾಖೆಗಳು ಹಾಗೂ ನಿಗಮ ಮಂಡಳಿಗಳಲ್ಲಿ ನಿರ್ಮಾಣ ಕಾಮಗಾರಿ, ಸೇವೆಗಳು ಹಾಗೂ ಸರಬರಾಜುವಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಗುತ್ತಿಗೆದಾರರಿಗೆ ಶೇ 24.10 ಮೀಸಲಾತಿ ನೀಡಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರ ಸಂಘ ಒತ್ತಾಯಿಸಿದೆ.
ಶಾಸಕರ ಭವನದಲ್ಲಿ ನಡೆದ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಈ ಒತ್ತಾಯ ಮಾಡಲಾಯಿತು. ‘ಈ ಕಾಮಗಾರಿಗಳ ಗುತ್ತಿಗೆ ಪಡೆಯಲು ಕಟ್ಟಬೇಕಾದ ಮುಂಗಡ ಹಣದಲ್ಲಿ ವಿನಾಯಿತಿ ನೀಡಬೇಕು. ಗುಣಮಟ್ಟದ ಷರತ್ತು ಹೊರತುಪಡಿಸಿ ಬೇರೆ ಯಾವುದೇ ಷರತ್ತು ವಿಧಿಸಬಾರದು. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ನೀಡಬೇಕು’ ಎಂದು ಸಂಘದ ಅಧ್ಯಕ್ಷ ಎಲ್.ಕೆ.ಅರಸು ಅವರು ಒತ್ತಾಯಿಸಿದರು.
‘ಸಮುದಾಯದ ಗುತ್ತಿಗೆದಾರರಿಗೆ ನಿರ್ಮಾಣ ಕಾಮಗಾರಿಗಳಲ್ಲಿ ಶೇ 50 ಲಕ್ಷಕ್ಕೆ ಮಿತಿಗೊಳಿಸಿ ಮೀಸಲಾತಿಯನ್ನು ನೀಡಿರುವುದು ಸರಿಯಲ್ಲ. ಈ ಮಿತಿಯನ್ನು ತೆಗೆದು ಹಾಕಬೇಕು’ ಎಂದು ಅವರು ಆಗ್ರಹಿಸಿದರು.