ಚಿಂತಾಮಣಿ: ಕೇರಳದ ವಿದ್ಯಾಸಂಸ್ಥೆ ಗಳಲ್ಲಿ ರಾಷ್ಟ್ರೀಯ ವಿಚಾರ, ಸಂಸ್ಕೃತಿ, ಸಭ್ಯತೆ ಮತ್ತು ಶ್ರೇಷ್ಠ ಮೌಲ್ಯಗಳನ್ನು ಸರಾಸಗಟಾಗಿ ತಳ್ಳಿ ಹಾಕುವ ಕಮ್ಯುನಿಷ್ಟರ ಮುಖವಾಡ ಕಳಚಲು ಭಾರತ ಮಾತಾ ಕೀ ಜೈ, ವಂದೇ ಮಾತರಂ ಎಂಬ ಘೋಷಣೆ ಯೊಂದಿಗೆ ಎಬಿವಿಪಿ ಕೇರಳ ಚಲೋ ಹಮ್ಮಿಕೊಂಡಿದೆ ಎಂದು ಉಡುಪಿ ಮಠದ ಲಕ್ಷ್ಮೀಪತಿ ಸ್ವಾಮೀಜಿ ತಿಳಿಸಿದರು.
ಇಲ್ಲಿನ ನಗರಸಭೆ ಆವರಣದಲ್ಲಿ ಬುಧವಾರ ಕೇರಳ ಚಲೋ ಕಾರ್ಯಕ್ರಮದ ಪೂರ್ವಭಾವಿಯಾಗಿ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕೇರಳದಲ್ಲಿ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅಧಿಕಾರ ವಹಿಸಿಕೊಂಡ ದಿನದಿಂದ ದೇವರ ಕಾಡು ಎಂಬ ಖ್ಯಾತಿಯ ಕೇರಳವು ರಾಜಕೀಯ ಕಗ್ಗೋಲೆ, ಅಪರಾಧ, ಹಿಂಸೆ, ಭಯೋತ್ಪಾದನೆ, ಅತ್ಯಾಚಾರಗಳ ಬೀಡಾಗಿ ಪರಿವರ್ತನೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇರಳದ ರಕ್ತಪಾತ ರಾಜಕೀಯ ಮಾನವೀಯತೆಯನ್ನು ಮರೆತಿದೆ. ಕಳೆದ 7 ದಶಕಗಳಲ್ಲಿ 280ಕ್ಕೂ ಅಧಿಕ ಮಂದಿ ಆರ್.ಎಸ್.ಎಸ್, ಎ.ಬಿ.ವಿ.ಪಿ, ಬಿ.ಎಂ.ಎಸ್, ಬಿ.ಜೆ.ಪಿಯ ಕ್ರಿಯಾಶೀಲ ಮುಖಂಡರು ಮಾರ್ಕ್ಸ್ವಾದಿಗಳ ದುಷ್ಕೃತ್ಯಕ್ಕೆ ಆಹುತಿಯಾಗಿದ್ದಾರೆ ಎಂದು ತಿಳಿಸಿದರು.
ಆರೋಪಿಗಳಿಗೆ ರಕ್ಷಣೆ ನೀಡುತ್ತಿ ರುವ ಸಿಪಿಎಂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ಕೊಡಬೇಕು ಮತ್ತು ಸಂಘದ ಕಾರ್ಯಕರ್ತ ರಾಮಕೃಷ್ಣನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿ ಯೇರಿ ಬಾಲಕೃಷ್ಣನ್ ಅವರನ್ನು ಗಡೀಪಾರು ಮಾಡಬೇಕು ಎಂದು ಆಗ್ರಹಪಡಿಸಿದರು.
ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಮುಖಂಡ ಮಣಿ ಮಾತನಾಡಿ,ಕೇರಳ ಕಮ್ಯೂನಿಷ್ಟರ ಕ್ರೂರ ಇತಿಹಾಸ ಜನರಿಗೆ ಅರ್ಥವಾಗ ತೊಡಗಿದೆ.ಸರ್ಕಾರದ ಕುಮ್ಮಕ್ಕಿನಿಂದ ತಮ್ಮ ಕಣ್ಣೆದುರೇ ನಡೆಯುತ್ತಿರುವ ಕೊಲೆ, ಹಿಂಸೆ, ಭರ್ಭರ ಕೃತ್ಯಗಳು ಕೇರಳ ಜನತೆಗೆ ಅಸಹ್ಯ ಹುಟ್ಟಿಸುತ್ತಿವೆ. ಯುವ ವಿದ್ಯಾರ್ಥಿಗಳು ಜಾಗೃತರಾಗಿದ್ದಾರೆ. ಎಂದರು. ಎಬಿವಿಪಿ ಜಿಲ್ಲಾ ಸಂಚಾಲಕ ಸುರೇಶ್, ನಗರಸಭೆ ಉಪಾಧ್ಯಕ್ಷೆ ಸುಜಾತಾ ಶಿವಪ್ಪ, ವಿದ್ಯಾರ್ಥಿ ಮುಖಂಡರಾದ ನವೀನ್, ವಿಜಯ್ ಉಪಸ್ಥಿತರಿದ್ದರು.
ಹತ್ಯೆಗೆ ಖಂಡನೆ
ಗೌರಿಬಿದನೂರು: ಕೇರಳದಲ್ಲಿ ಕಮ್ಯುನಿಸ್ಟರು ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಸೈದ್ಧಾಂತಿಕ ಕಾರಣಕ್ಕಾಗಿ ಹತ್ಯೆ ಮಾಡುತ್ತಿರುವುದನ್ನು ಖಂಡಿಸಿ ನ.11ರಂದು ಕೇರಳದ ತಿರುವನಂತಪುರದಲ್ಲಿ ಚಲೋ ಕೇರಳ ಜಾಥಾ ನಡೆಯಲಿದೆ.
ಜಾಥಾ ಪ್ರಯುಕ್ತ ಭಿತ್ತಿ ಪತ್ರವನ್ನು ಪಟ್ಟಣದ ಆಚಾರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಬಿಡುಗಡೆಗೊಳಿಸಲಾಯಿತು. ಎಬಿವಿಪಿ ಜಿಲ್ಲಾ ಸಂಚಾಲಕ ಚರಣ್ ರೆಡ್ಡಿ ಮಾತನಾಡಿದರು. ಆಚಾರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜಶೇಖರ್, ಉಪನ್ಯಾಸಕ ನಟರಾಜ್, ಖಾದ್ರಿ ಕುಮಾರ್, ವಿದ್ಯಾರ್ಥಿಗಳಾದ ಮಂಜುನಾಥ್, ವಿನಯ್, ಮಮತಾ, ಚಾಂದಿನಿ, ಇಂಚರ, ಭವ್ಯಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.