ವೈ.ಎನ್.ಹೊಸಕೋಟೆ : ‘ಸರ್ಕಾರವು ರೇಷ್ಮೆ ಬೆಳೆಗೆ ವಿಮೆ ಸೌಲಭ್ಯ ಒದಗಿಸಿದರೆ ರೇಷ್ಮೆ ಕೃಷಿ ಮತ್ತಷ್ಟು ಪ್ರಗತಿ ಕಾಣುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಮ್ಮ ತಿಮ್ಮಪ್ಪ ತಿಳಿಸಿದರು. ಗ್ರಾಮದಲ್ಲಿ ದಾವಣಗೆರೆ ಜಿಲ್ಲೆಯ ತೋಳಹುಣಸೆಯ ರೇಷ್ಮೆ ಕೃಷಿ ತರಬೇತಿ ಸಂಸ್ಥೆ ಮತ್ತು ರೇಷ್ಮೆ ಇಲಾಖೆಯಿಂದ ಗುರುವಾರ ನಡೆದ ರೈತರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಎಲ್ಲ ಬೆಳೆಗಳಿಗೆ ಸರ್ಕಾರ ಇಂದು ಬೆಳೆ ವಿಮೆ ನೀಡುತ್ತಿದೆ. ಆದರೆ ರೇಷ್ಮೆ ಬೆಳೆಗೆ ವಿಮೆ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿ ವಿಮೆ ದೊರಕಿಸುವ ಪ್ರಯತ್ನ ಮಾಡಬೇಕು’ ಎಂದು ಹೇಳಿದರು.
ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರಂಗನಾಥ ‘ಪಾವಗಡ ತಾಲ್ಲೂಕಿನ ರೈತರು ಗುಣಮಟ್ಟದ ರೇಷ್ಮೆ ಬೆಳೆಯುವಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದಾರೆ. ಸರ್ಕಾರ ಬಹಳಷ್ಟು ಸಹಾಯಧನಗಳನ್ನು ನೀಡುತ್ತಿದೆ. ರೈತರು ಸವಲತ್ತುಗಳನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ರೈತ ಟಿ.ಉಮೇಶ್ ಮಾತನಾಡಿದರು. ತೋಳಹುಣಸೆ ರೇಷ್ಮೆ ಕೃಷಿ ತರಬೇತಿ ಸಂಸ್ಥೆಯ ಅಧಿಕಾರಿ ಹರ್ಷ, ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಸಿ.ನಾಗರಾಜು, ಮುಖಂಡ ತಿಮ್ಮಪ್ಪ, ರೇಷ್ಮೆ ಇಲಾಖೆಯ ಅಧಿಕಾರಿ ಈರಣ್ಣ, ಪಾಪಯ್ಯ ಮತ್ತು ರೈತರು ಇದ್ದರು.