ಉತ್ತರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಅಧಿಕಾರಿಗಳನ್ನುದ್ದೇಶಿಸಿ ಹೊರಡಿಸಿರುವ ಒಂದು ಆಜ್ಞೆ ಚರ್ಚಾಸ್ಪದವಾಗಿದ್ದು, ಅದು ಹಾಸ್ಯಾಸ್ಪದವೂ ಆಗಿದೆ.
‘ಮಂತ್ರಿಗಳು– ಶಾಸಕರು, ಅಧಿಕಾರಿಗಳ ಭೇಟಿಗೆ ಬಂದಾಗ ಅಧಿಕಾರಿಗಳು ಎದ್ದುನಿಂತು ಅವರಿಗೆ ಗೌರವ ಸೂಚಿಸುವುದರ ಜತೆಗೆ ಅವರನ್ನು ಚೆನ್ನಾಗಿ ಉಪಚರಿಸಿ ಅವರು ಹೊರಟಾಗ ಅವರ ಬೆಂಗಾವಲಾಗಿ ಹೋಗಿ ಗೌರವದಿಂದ ಬೀಳ್ಕೊಡಬೇಕು!’ ಎಂದು ಸೂಚಿಸಿದ್ದಾರೆ. ‘ತುಘಲಕ್ ದರ್ಬಾರ್’ ಅಂದರೆ ಇದೇ!
ಪ್ರಜಾಪ್ರಭುತ್ವದ ಹೆಸರಿನಲ್ಲಿ ನಮ್ಮ ದೇಶದಲ್ಲಿ ನಡೆಯುತ್ತಿರುವ ಹಿಪಾಕ್ರಸಿಯ ಒಂದು ಸ್ಯಾಂಪಲ್ ಇದು! ಪಕ್ಷ ಯಾವುದೇ ಇರಲಿ, ನಮ್ಮ ಬಹುತೇಕ ಪುಢಾರಿಗಳು ತಮ್ಮ ಠೀವಿ, ಠೇಂಕಾರ, ಆಂಗಿಕ ಭಾಷೆಯ ಮೂಲಕ ‘ತಮಗಿಂತ ಹಿರಿಯರಿಲ್ಲ’ ಎಂಬ ಗತ್ತಿನಲ್ಲೇ ವರ್ತಿಸುವುದನ್ನು ಕಾಣುತ್ತೇವೆ.
ಮಂತ್ರಿಗಳಾಗಲಿ, ಶಾಸಕರಾಗಲಿ, ಅಧಿಕಾರಿಗಳೇ ಆಗಲಿ, ಇವರೆಲ್ಲರೂ ಸಾರ್ವಜನಿಕ ಸೇವಕರೇ ಹೊರತು ಅಧಿಕಾರ, ಅಂತಸ್ತಿನ ದರ್ಪ ತೋರಿಸುವುದಕ್ಕೆ ಅವರನ್ನು
ಅಲ್ಲಿ ಕೂಡಿಸಿರುವುದಿಲ್ಲ. ಅಧಿಕಾರಿಯ ನಾಯಿ ಸತ್ತಾಗ ಇಡೀ ಊರೇ ನೆರೆದಿರುತ್ತದೆ! ಆದರೆ ಅದೇ ಅಧಿಕಾರಿ ಸತ್ತಾಗ ಅತ್ತ ಒಂದು ನಾಯಿ ಸಹ ಸುಳಿಯುವುದಿಲ್ಲ!