ಭುವನೇಶ್ವರ: ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸಯಾಮಿ ಅವಳಿಗಳಾದ ಜಗ ಮತ್ತು ಕಾಲಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ಒಡಿಶಾದ ಆರೋಗ್ಯ ಸಚಿವ ಪ್ರತಾಪ್ ಜೆನಾ ಶುಕ್ರವಾರ ತಿಳಿಸಿದ್ದಾರೆ.
ನಿರಂತರ 18 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ, ಎರಡು ವರ್ಷ ನಾಲ್ಕು ತಿಂಗಳ ಅವಳಿಗಳ ತಲೆಯನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ಪರಿಣತ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದು, ಮುಂದಿನ 30 ಗಂಟೆಗಳ ಅವಧಿ ಅವರ ಪಾಲಿಗೆ ನಿರ್ಣಾಯಕವಾಗಿರಲಿದೆ ಎಂದು ಸಚಿವರು ಹೇಳಿದ್ದಾರೆ.
ಮಕ್ಕಳು ಶೀಘ್ರ ಚೇತರಿಸಿಕೊಳ್ಳಲೆಂದು ರಾಜ್ಯದಾದ್ಯಂತ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆಗಾಗಿ ಏಮ್ಸ್ ವೈದ್ಯರ ತಂಡಕ್ಕೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಜು ಜನತಾ ದಳ (ಬಿಜೆಡಿ) ಕಾರ್ಯಕರ್ತರು ಇಲ್ಲಿಯ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದರೆ, ಪುರಿಯಲ್ಲಿ ಕೆಲ ಸಾಂಸ್ಕೃತಿಕ ಸಂಘಟನೆಗಳು ಜಗನ್ನಾಥನ ಸನ್ನಿಧಿಯಲ್ಲಿ ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿವೆ. ಶಾಲಾ–ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.
ಕಂಧಮಲ್ ಜಿಲ್ಲೆಯ ಫಿರಿಂಗಿಯಾ ಬ್ಲಾಕ್ನ ಮಿಲಿಪಾದ ಗ್ರಾಮದ ಈ ಅವಳಿ ಸಹೋದರರನ್ನು ಪರಸ್ಪರ ಬೇರ್ಪಡಿಸುವುದಕ್ಕೆ ಸಂಬಂಧಿಸಿದ ಮೊದಲ ಶಸ್ತ್ರಚಿಕಿತ್ಸೆ ಆಗಸ್ಟ್ 28ರಂದು ನಡೆದಿತ್ತು.